ಬೆಂಗಳೂರು: ಪಂಚಮಸಾಲಿ ಸಮುದಾಯದ ಹೆಸರು ಹೇಳಿಕೊಂಡು ಹೊರಗಿನಿಂದ ಬಂದು ಟಿಕೆಟ್ ಪಡೆದಿದ್ದಾರೆ. ಹಾಗಿದ್ದರೆ ಅದೇ ಜಿಲ್ಲೆಯ ಮತ್ತು ಅದೇ ಸಮುದಾಯದವಳಾದ ನಾನು ಅಸಮರ್ಥಳಾ ಎಂದು ಕಾಂಗ್ರೆಸ್ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿ ಬದಲಾವಣೆ ಮಾಡಿ ಎಂದಿದ್ದೆ.
ಅದು ಸಾಧ್ಯವಿಲ್ಲ ಎಂದು ನಮ್ಮ ನಾಯಕರು ಹೇಳಿದ್ದಾರೆ. ನನ್ನ ಪರವಾಗಿ ನ್ಯಾಯ ಕೇಳಿ ಬೇರೆ ಸಮುದಾಯದ ಮುಖಂಡರೆಲ್ಲ ಬಂದಿದ್ದರು. ಸಾಕಷ್ಟು ನಿರೀಕ್ಷೆಯೊಂದಿಗೆ ಮುಖ್ಯಮಂತ್ರಿ ಭೇಟಿ ಮಾಡಿದ್ದೆವು. ಆದರೆ ಎಲ್ಲರಿಗೂ ನಿರಾಸೆ ಆಗಿದೆ ಎಂದರು.
2019ರಲ್ಲಿ ಬೇರೆ ಬೇರೆ ನಾಯಕರ ಪ್ರಭಾವ ಮತ್ತು ಅಲೆ ಇದ್ದಾಗಲೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಅಲ್ಪ ಅಂತರದಿಂದ ಸೋತಿದ್ದೆ. ಈ ಬಾರಿ ಶತಾಯಗತಾಯ ಗೆಲ್ಲಲು ನಿರ್ಧರಿಸಿದ್ದೆ. ಆದರೆ ಟಿಕೆಟ್ ಕೊಡಲೇ ಇಲ್ಲ. ಯಾಕೆ ಟಿಕೆಟ್ ಕೊಟ್ಟಿಲ್ಲ ಅಂದಾಗ ಜಿಲ್ಲೆಯ ಶಾಸಕರು ನನ್ನ ಹೆಸರನ್ನೇ ಹೇಳಿಲ್ಲ ಎಂಬ ಉತ್ತರ ಸಿಕ್ಕಿತು. ನಮ್ಮ ನಾಯಕರು ಯಾವುದೇ ಭರವಸೆ ನೀಡಿಲ್ಲ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರಿಂದ ವಿಧಾನಸಭೆ ಚುನಾವಣೆ ಕಣಕ್ಕಿಳಿಯಲು ಹೇಳಿದಾಗ ನಾನು ಒಪ್ಪಿರಲಿಲ್ಲ. ಈಗ ತುಂಬಾ ನಿರಾಸೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.