ದೇವನಹಳ್ಳಿ, ಮಾರ್ಚ್ 28: ಸಿಲಿಕಾನ್ ಸಿಟಿ ಅಂದರೆ ಇತ್ತೀಚೆಗೆ ಟ್ರಾಪಿಕ್ನಿಂದಾಗಿ ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಪೀಕ್ ಅವರ್ನಲ್ಲಿ ಪೀಣ್ಯ ಕಡೆಯಿಂದ ಹಾಸನ- ತುಮಕೂರು ಹೆದ್ದಾರಿ(highway)ತಲುಪಲು ಸವಾರರು ಹೈರಣಾಗುತ್ತಿದ್ದರು. ಆದರೆ ಈಗ ಸಿಟಿ ಹೊರ ವಲಯದಲ್ಲಿ ಜನರಿಗೆ ಸಂಚಾರಕ್ಕೆ ಹೈಟೆಕ್ ಹೈವೆ ಮುಕ್ತವಾಗಿದೆ. ಆ ಮೂಲಕ ಹೆದ್ದಾರಿ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹಾಡುವ ಜೊತೆಗೆ ಸುರಕ್ಷತೆಗೂ ಒತ್ತು ನೀಡಲಾಗಿದೆ. ಹೊಸಕೋಟೆಯಿಂದ ದೇವನಹಳ್ಳಿ, ದೊಡ್ಡಬಳ್ಳಾಪುರ ಮೂಲಕ ದಾಬಸ್ ಪೇಟೆವರೆಗೂ ಹೆದ್ದಾರಿ ನಿರ್ಮಾಣವಾಗಿದೆ.
ಅಂದಹಾಗೆ ಇಷ್ಟು ದಿನ ಆಂಧ್ರದ ಚಿತ್ತೂರು ತಮಿಳುನಾಡಿನ ಚೆನೈನಿಂದ ಮಂಗಳೂರಿಗೆ ಹೋಗಲು ಬರ್ತಿದ್ದ ವಾಹನ ಸವಾರರು ಸಿಟಿ ಒಳಗಡೆ ಪ್ರವೇಶವಾಗಿ ಪೀಣ್ಯ ಫ್ಲೈ ಓವರ್ ಮೂಲಕ ನೆಲಮಂಗಲ ತಲುಪಿ ಹೆದ್ದಾರಿಯಲ್ಲಿ ಗಂಟೆ ಗಟ್ಟಲೆ ಕಾದು ತೆರಳುತ್ತಿದ್ದರು. ಆದರೆ ಇದೀಗ ಸಿಟಿ ಹೊರವಲಯದಲ್ಲಿ ನೂತನ ಹೆದ್ದಾರಿ ನಿರ್ಮಾಣವಾಗಿದ್ದು ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರವರೆಗೂ ಸಂಪೂರ್ಣ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಿದೆ.
ಕೋಲಾರ ಬೆಂಗಳೂರು ಹೆದ್ದಾರಿಯಿಂದ ಆರಂಭವಾಗುವ ನೂತನ ಹೆದ್ದಾರಿ ದೇವನಹಳ್ಳಿ ದೊಡ್ಡಬಳ್ಳಾಪುರ ಮೂಲಕ ಪಟ್ಟಣಗಳನ್ನ ಪ್ರವೇಶಿಸದೆ ಹೊರವಲಯದ ಫ್ಲೈ ಓವರ್ಗಳ ಮೂಲಕ ಸಾಗಿದ್ದು ಎಲ್ಲೆಡೆ ಕಿಲೋ ಮೀಟರ್ಗೆ ಒಂದರಂತೆ ಹೈಟೆಕ್ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಜೊತೆಗೆ ಒಂದು ಬದಿಯಲ್ಲಿ ಎರಡು ಹಾಗೂ ಮೂರು ಪಥಗಳ ಹೆದ್ದಾರಿಯನ್ನ ಮಾಡಲಾಗಿದ್ದು ಇಷ್ಟು ದಿನ ಹೊಸಕೋಟೆಯಿಂದ ದಾಬಸ್ ಪೇಟೆಗೆ ಮೂರು ಗಂಟೆಗೂ ಹೆಚು ಕಾಲ ಸಂಚರಿಸುತ್ತಿದ್ದ ವಾಹನ ಸವಾರರು ಇದೀಗ ಒಂದು ಗಂಟೆಯಲ್ಲೆ ಹೊಸಕೋಟೆಯಿಂದ ದಾಬಸ್ ಪೇಟೆಯನ್ನ ತಲುಪುತ್ತಿದ್ದಾರೆ.