ಚಿತ್ರದುರ್ಗ: ಲೋಕಸಭಾ ಚುನಾವಣೆ (Loksabha Election) ಟಿಕೆಟ್ ವಂಚಿತ ಹಾಲಿ ಸಂಸದ, ಕೇಂದ್ರ ಸಚಿವ ನಾರಾಯಣಸ್ವಾಮಿ (Union Minister Narayanaswamy), ಸ್ವಪಕ್ಷದವರ ವಿರುದ್ಧವೇ ಅಸಮಾಧಾನ ಹೊರ ಹಾಕಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ನಾರಾಯಣಸ್ವಾಮಿ, ಚಿತ್ರದುರ್ಗ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಬಹಳ ನೋವಿದೆ.
ಅಲ್ಲಿನ ರಾಜಕಾರಣಿಗಳು ಕೇಳಿಲ್ಲ ಅಂತಾನೇ ನಾನು ರಾಜಕಾರಣ ಬಿಟ್ಟಿದ್ದೇನೆ. ಅವರು ಎಲ್ಲಾ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡ್ತಿದ್ದಾರೆ. ನನ್ನ ನಡವಳಿಕೆ ಬಗ್ಗೆ ಬಹಳ ಜನಕ್ಕೆ ಆಗೋದಿಲ್ಲ. ಒಳ ರಾಜಕೀಯ, ಕಂತ್ರಿ ಕೆಲಸವನ್ನು ನಾನು ಯಾವತ್ತಿಗೂ ಮಾಡಿಯೇ ಇಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಗೋವಿಂದ ಕಾರಜೋಳ ಹಿರಿಯ ಸಹೋದರ, ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಚಿತ್ರದುರ್ಗ ಕ್ಷೇತ್ರದ ಕುರಿತು ನನ್ನ ತೀರ್ಮಾನ, ಪಕ್ಷ ನನ್ನ ಜೊತೆ ಇದೆ. ಕಾಂಗ್ರೆಸ್ ಆಡಳಿತ ಹೇಗಿದೆ ಅಂತಾ ಚುನಾವಣೆ ಮುಗಿದ ಮೇಲೆ ಮಾತಾಡ್ತೀನಿ ಎಂದು ಹೇಳಿದರು.
ರಾಜ್ಯದಲ್ಲಿ ರಾಜಕಾರಣ ಮಾಡ್ತೀನಿ
ರಾಜ್ಯ ರಾಜಕಾರಣದಲ್ಲಿ ಅಲ್ಲ, ಮುಂದೆ ಸಮಾಜದ ಮಧ್ಯದಲ್ಲಿ ಇರುತ್ತೇನೆ. ಜಿಲ್ಲೆಯಲ್ಲಿ ನನ್ನ ಯಾವ ವಿಷಯಕ್ಕೆ ತಿರಸ್ಕಾರ ಮಾಡಿದ್ರೋ ಗೊತ್ತಿಲ್ಲ. ಅದೇ ವಿಷಯಗಳ ಮೂಲಕ ಭವಿಷ್ಯದಲ್ಲಿ ಮುಂದೆ ಅವರನ್ನು ತಿರಸ್ಕಾರ ಮಾಡ್ತಾರೆ ಎಂದು ಬೇಸರದಲ್ಲಿಯೇ ಸ್ವಪಕ್ಷದವರ ವಿರುದ್ಧ ನಾರಾಯಣಸ್ವಾಮಿ ಗುಡುಗಿದರು. ನಾನು ಚಿತ್ರದುರ್ಗ ಬಿಟ್ಟಿರಬಹುದು, ಆದರೆ ರಾಜ್ಯದಲ್ಲಿ ರಾಜಕಾರಣ ಮಾಡ್ತೀನಿ ಎಂದು ಸ್ಪಷ್ಟಪಡಿಸಿದರು.