ಮೈಸೂರು, ಮಾರ್ಚ್ 27: ಲೋಕಸಭೆ ಚುನಾವಣೆ (Lok Sabha Elections) ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಪ್ತ ಹೆಚ್ವಿ ರಾಜೀವ್ ನಂತರ ಮತ್ತೊಬ್ಬ ಆಪ್ತನಿಗೆ ಮೈಸೂರಿನ ರೆಸಾರ್ಟ್ನಲ್ಲೇ ಕುಳಿತುಕೊಂಡು ಗಾಳ ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಟಕ್ಕರ್ ನೀಡಿದ್ದಾರೆ. ಸಿಎಂ ತವರು ಜಿಲ್ಲೆಗೆ ತಲುಪಿರುವ ವಿಜಯೇಂದ್ರ ಕಾರ್ಯಾಚರಣೆ ಶುರು ಮಾಡಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ತಂತ್ರಕ್ಕೆ ಪ್ರತಿ ತಂತ್ರ ಹೂಡಿದ್ದಾರೆ. ಸಿದ್ದರಾಮಯ್ಯ ಮನವೊಲಿಸಿದ್ದರಿಂದ ಪಕ್ಷ ಬಿಟ್ಟು ಕಾಂಗ್ರೆಸ್ ಸೇರಲು ಮುಂದಾಗಿದ್ದ ಮುಖಂಡನನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರುಣ ಕ್ಷೇತ್ರದ ಮುಖಂಡ ಸದಾನಂದರನ್ನು ಭೇಟಿಯಾದ ವಿಜಯೇಂದ್ರ ಅವರ ಮನವೊಲಿಸಿದ್ದಾರೆ. ಸದಾನಂದ ಇಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಮುಂದಾಗಿದ್ದರು. ಹೀಗಾಗಿ ಮಂಗಳವಾರ ರಾತ್ರಿ ಅವರನ್ನು ಭೇಟಿಯಾಗಿ ಮಾತನಾಡಿದ್ದ ವಿಜಯೇಂದ್ರ ಸಿಹಿ ತಿನಿಸಿ ಪಕ್ಷದಲ್ಲೇ ಉಳಿಸಿಕೊಂಡಿದ್ದಾರೆ. ಈ ಮೂಲಕ ‘ಕೈ’ ನಾಯಕರಿಗೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.