ಮೈಸೂರು, ಮಾರ್ಚ್ 26: ಲೋಕಸಭೆ ಚುನಾವಣೆಯಲ್ಲಿ (Lok Sabha Elction) ಮೈಸೂರು ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರನ್ನು ಗೆಲ್ಲಿಸಲು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ (Siddaramaiah) ಮೂರು ದಿನಗಳ ಮೈಸೂರು (Mysuru) ಪ್ರವಾಸದಲ್ಲಿದ್ದಾರೆ. ಇದೇ ವೇಳೆ, ಮೈಸೂರಿನ ರೆಸಾರ್ಟ್ನಲ್ಲಿ ಕುಳಿತುಕೊಂಡೇ ‘ಆಪರೇಷನ್ ಹಸ್ತ’ಕ್ಕೆ (Operation Hasta) ಮುಂದಾಗಿದ್ದಾರೆ. ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಆಪ್ತರಿಗೆ ಸಿಎಂ ಸಿದ್ದರಾಮಯ್ಯ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಆಪ್ತ ಹೆಚ್ವಿ ರಾಜೀವ್ ನಂತರ ಮತ್ತೊಬ್ಬ ಆಪ್ತನಿಗೆ ಸಿದ್ದರಾಮಯ್ಯ ಗಾಳ ಹಾಕಿದ್ದಾರೆ. ವರುಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸದಾನಂದರನ್ನು ಪಕ್ಷಕ್ಕೆ ಸೆಳೆಯಲು ಮುಂದಾಗಿದ್ದಾರೆ.
ಈ ಹಿಂದೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೆನ್ನಿಗೆ ನಿಂತಿದ್ದ ಸದಾನಂದರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಸಿದ್ದರಾಮಯ್ಯ ಬಹುತೇಕ ಯಶಸ್ವಿಯಾಗಿದ್ದಾರೆ. ಸದಾನಂದ ವೀರಶೈವ ಸಮುದಾಯದ ಮುಖಂಡ ಸಹ ಆಗಿದ್ದು, ಅವರನ್ನು ಸೆಳೆಯುವ ಮೂಲಕ ವೀರಶೈವ ಮತಗಳ ಕ್ರೂಡೀಕರಣಕ್ಕೂ ಸಿದ್ದರಾಮಯ್ಯ ಯೋಜನೆ ರೂಪಿಸಿದ್ದಾರೆ.
ಇವರುಗಳ ಜೊತೆ ಮಾಜಿ ಮೇಯರ್ ಎಲ್ ಬೈರಪ್ಪ, ಪಾಲಿಕೆಯ ಕೆಲವು ಮಂದಿ ಮಾಜಿ ಸದಸ್ಯರು ಕೂಡ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಮೈಸೂರು ಕೊಡಗು, ಚಾಮರಾಜನಗರ ಕ್ಷೇತ್ರವನ್ನು ಶತಾಯುಗತಾಯ ಗೆಲ್ಲಲೇ ಬೇಕು ಎಂದು ಯೋಜನೆ ಹಾಕಿಕೊಂಡಿರುವ ಸಿದ್ದರಾಮಯ್ಯ, ಇದೇ ಕಾರಣಕ್ಕೆ ಆಪರೇಷನ್ ಹಸ್ತ ನಡೆಸುತ್ತಿದ್ದಾರೆ.
ಮೈಸೂರು ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ವಿಚಾರವಾಗಿ ಈಗಾಗಲೇ ಪಕ್ಷದ ಶಾಸಕರು, ಮುಖಂಡರ ಜೊತೆ ಸಿದ್ದರಾಮಯ್ಯ ಒಂದು ಸುತ್ತಿನ ಸಭೆ ನಡೆಸಿದ್ದರು. ಭಾನುವಾರ ರಾತ್ರಿಯೇ ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಖಾಸಗಿ ರೆಸಾರ್ಟ್ಗೆ ತೆರಳಿದ್ದು, ವಿಶ್ರಾಂತಿ ನೆಪದಲ್ಲಿ ಪಕ್ಷದ ಗೆಲುವಿಗೆ ರಣತಂತ್ರ ರೂಪಿಸುತ್ತಿದ್ದಾರೆ.