ಬೆಳಗಾವಿಯಲ್ಲಿ ಕುಟುಂಬ ರಾಜಕಾರಣದ ಹೊಸಮಜಲು ಆರಂಭಿಸಿ, ಜಾರಕಿಹೊಳಿ ‘ಸಾಹುಕಾರ್’ ರ ಭದ್ರಕೋಟೆಗೆ ನುಗ್ಗಿದ ‘ಜೊಲ್ಲೆ’ ಕುಟುಂಬ, ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಂಡಿತ್ತು. ಬೆಳಗಾವಿ ಮಟ್ಟಿಗೆ ಜಾರಕಿಹೊಳಿ, ಕತ್ತಿ, ಸವದಿ, ಕೋರೆ, ಹುಕ್ಕೇರಿ ಈ ಕುಟುಂಬಗಳೇ ರಾಜಕೀಯವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದವು.
ನಿಪ್ಪಾಣಿಗೆ ಕಾಲಿಟ್ಟ ಶಶಿಕಲಾ ಜೊಲ್ಲೆ, ಅಲ್ಲಿ ಗೆಲ್ಲುವ ಮೂಲಕ ಕುಟುಂಬ ರಾಜಕಾರಣದ ಹೊಸ ಪರ್ವ ಆರಂಭಿಸಿದರು. 2019ರಲ್ಲಿ ತಮ್ಮ ಗಂಡ ಅಣ್ಣಾಸಾಹೇಬ ಜೊಲ್ಲೆಯವರಿಗೆ ಚಿಕ್ಕೋಡಿ ಲೋಕಸಭೆಗೆ ಟಿಕೆಟ್ ದಕ್ಕಿಸಿಕೊಂಡರು. ಅಲ್ಲಿಗೆ, ಕತ್ತಿ-ಜಾರಕಿಹೊಳಿ-ಹುಕ್ಕೇರಿ ಹಿಡಿತದಲ್ಲಿದ್ದ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಆರಂಭಿಸಿದರು.
ಈ ಬಾರಿ, ಸಚಿವ ಸತೀಶ ಜಾರಕಿಹೊಳಿ ತಮ್ಮ ಭದ್ರಕೋಟೆ ಉಳಿಸಿಕೊಳ್ಳುವ ಅನಿವಾರ್ಯಕ್ಕೆ ಸಿಲುಕಿದ್ದಾರೆ.
ಮಗಳು ಪ್ರಿಯಾಂಕಾ ಗೆಲ್ಲಿಸಿಕೊಳ್ಳುವ ಸವಾಲೂ ಅವರ ಮುಂದಿದೆ. ಜತೆಗೆ, ಶಾಸಕ ಲಕ್ಷ್ಮಣ ಸವದಿ ಬಲವೂ ‘ಕೈ’ ಹಿಡಿಯಬಹುದು. ಸತೀಶ ಅವರ ಸಹೋದರರಾದ ರಮೇಶ ಮತ್ತು ಬಾಲಚಂದ್ರ ಬಿಜೆಪಿ ಶಾಸಕರು. ಲಖನ್ ವಿಧಾನಪರಿಷತ್ತಿನ ಸದಸ್ಯ.
ಅಣ್ತಮ್ಮಗಳು ರಕ್ತ ಸಂಬಂಧಿ ‘ಮಗಳ’ ಪರವೋ, ಜೊಲ್ಲೆ ಕುಟುಂಬದವರಿಗೆ ವರವೋ…? ಫಲಿತಾಂಶದಲ್ಲಷ್ಟೇ ಪ್ರಶ್ನೆಗೆ ಉತ್ತರ ದಕ್ಕೀತು.