ನವದೆಹಲಿ:ಕೆಪಿಸಿಸಿಗೆ ಐವರು ನೂತನ ಕಾರ್ಯಾಧ್ಯಕ್ಷರನ್ನು ಕಾಂಗ್ರೆಸ್ ಶನಿವಾರ ನೇಮಕ ಮಾಡಿದೆ. ಲೋಕಸಭಾ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಿಸಲಾಗಿದೆ. ಈ ನೇಮಕದಲ್ಲಿ ಜಾತಿ ಹಾಗೂ ಪ್ರದೇಶವಾರು ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸಿದೆ.
ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ಕಗ್ಗಂಟನ್ನು ಕೈ ಪಾಳಯ ಬಹುತೇಕ ಬಗೆಹರಿಸಿದೆ. ಅದರ ಬೆನ್ನಲ್ಲೇ, ಪಕ್ಷದ ಸಂಘಟನಾತ್ಮಕ ಬದಲಾವಣೆ ಮಾಡಿದೆ.
ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬುದು ಕಾಂಗ್ರೆಸ್ನಲ್ಲಿರುವ ನಿಯಮ. ಅನುಕೂಲಕ್ಕೆ ತಕ್ಕಂತೆ ಈ ನಿಯಮದಲ್ಲಿ ಕೆಲವು ನಾಯಕರಿಗೆ ವಿನಾಯಿತಿ ಸಿಕ್ಕಿದ್ದು ಉಂಟು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ ಹಾಗೂ ಈಶ್ವರ ಖಂಡ್ರೆ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಕಾರ್ಯಾಧ್ಯಕ್ಷರ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಅವರು ಈ ಹಿಂದೆಯೇ ಕೋರಿಕೊಂಡಿದ್ದರು.