ಬೆಂಗಳೂರು: ನಾನೇ ಸ್ಟ್ರಾಂಗ್ ಎನ್ನುವ ಸಿದ್ದರಾಮಯ್ಯನವರೇ ನಿಮ್ಮ ಪರಿಸ್ಥಿತಿ ಏನಿದೆ; 5 ವರ್ಷ ಸಿಎಂ ಆಗಿರುವ ಖಾತರಿಯೇ ನಿಮಗಿಲ್ಲ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇ 5 ವರ್ಷ ಸಿಎಂ, ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಎಂದು ಹೇಳಿಸಿಕೊಳ್ಳುವ ಸ್ಥಿತಿ ಅವರದು.
ದುರ್ಬಲ ಆಡಳಿತ ಸಿದ್ದರಾಮಯ್ಯರದು. ಕಳೆದೊಂದು ವರ್ಷವನ್ನು ಗಮನಿಸಿದರೆ ಆಡಳಿತದ ಹಿಡಿತವೇ ಅವರಿಗೆ ಸಿಕ್ಕಿಲ್ಲ ಎಂದು ಅರಿವಾಗುತ್ತದೆ ಟೀಕಿಸಿದರು. ನೀವೇ ನೇಮಕ ಮಾಡಿಕೊಂಡ ರಾಜಕೀಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಸಲಹೆಗಾರರು ‘ಅಭಿವೃದ್ಧಿಗೆ ಬಿಡಿಗಾಸೂ ಕೊಡುತ್ತಿಲ್ಲ’ ಎಂದು ನಿಮ್ಮ ಗುಣಗಾನ ಮಾಡಿದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು.