ಚಿಕ್ಕೋಡಿ: ಹಂಡ ಕುದರಿ ಪುಂಡ ಅರಣ್ಯಸಿದ್ಧಗ ಚಾಂಗ್ ಭಲೋ… ಬಿಳಿ ಗುಡಿ ಅರಣ್ಯಸಿದ್ಧಗ ಚಾಂಗ ಭಲೋ… ಎಂಬ ಉದ್ಘೋಷ ಇಡೀ ಕ್ಷೇತ್ರದಲ್ಲಿ ಮೊಳಗಿತು. ರಣಬಿಸಿಲಿನ ಮಧ್ಯೆಯೂ ಭಂಡಾರದ ಹೊಳೆ ಹರಿಸಿದ ಭಕ್ತರು, ಸಂಭ್ರಮದಲ್ಲಿ ಮಿಂದೆದ್ದರು. ಊರಿಗೆ ಊರೇ ಹಳದಿಮಯವಾಗಿತ್ತು.
ತಾಲ್ಲೂಕಿನ ಕೆರೂರಿನಲ್ಲಿ ಅರಣ್ಯ ಸಿದ್ಧೇಶ್ವರ ಹಾಗೂ ಮಲಕಾರಿ ಸಿದ್ಧೇಶ್ವರ ಜಾತ್ರೆ ಕೊನೆಯ ದಿನವಾದ ಸೋಮವಾರ ನಡೆದ ಭಂಡಾರದ ಓಕುಳಿಯಲ್ಲಿ ಕಂಡುಬಂದ ದೃಶ್ಯಗಳಿವು.
ಮಾರ್ಚ್ 13ರಂದು ಆರಂಭಗೊಂಡ ಈ ಜಾತ್ರೆ ‘ನಿವ್ವಾಳಕಿ’ ಸಲ್ಲಿಸುವ ಮತ್ತು ‘ದೇವವಾಣಿ’ ನುಡಿಯುವ ಮೂಲಕ ಸಂಪನ್ನಗೊಂಡಿತು. ಚಮ್ಮಾಳಿಗೆ ತರುವುದು, ಕರಿ ಕಟ್ಟುವುದು, ಮಹಾನೈವೇದ್ಯ ಸಮರ್ಪಿಸುವುದು ಹೀಗೆ… ಐದು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಜೋಡು ಕುದುರೆ ಗಾಡಿ, ಜೋಡೆತ್ತಿನ ಗಾಡಿ ಮತ್ತು ಒಂದು ಕುದುರೆ-ಒಂದು ಎತ್ತಿನಗಾಡಿ ಓಡಿಸುವ ಸ್ಪರ್ಧೆ ಜನರನ್ನು ಸೆಳೆದವು.
ಕೆರೂರಿನ ಜಾತ್ರೆ ‘ಭಂಡಾರದ ಜಾತ್ರೆ’ ಎಂದೇ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ ಪ್ರಸಿದ್ಧ. ಸೋಮವಾರ ಬೆಳಿಗ್ಗೆ ದೇವರ ಪಲ್ಲಕ್ಕಿ ಬನದಲ್ಲಿ ಆಗಮಿಸುತ್ತಿದ್ದಂತೆ, ನೆರೆದಿದ್ದ ಸಹಸ್ರಾರು ಭಕ್ತರು ಭಂಡಾರ ಹಾರಿಸಿ ಹರಕೆ ತೀರಿಸಿದರು. ಅಷ್ಟ ದಿಕ್ಕುಗಳಿಂದ ಹಾರುತ್ತಿದ್ದ ಭಂಡಾರದ ಕಣಗಳು ಜಾತ್ರೆಗೆ ಇನ್ನಷ್ಟು ಮೆರುಗು ತಂದವು.
30 ಟನ್ ಭಂಡಾರ ಮಾರಾಟ: ಕಳೆದ ವರ್ಷ ಈ ಜಾತ್ರೆಯಲ್ಲಿ 20 ಟನ್ ಭಂಡಾರ ಮಾರಾಟವಾಗಿತ್ತು. ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ 30 ಟನ್ಗೂ ಟನ್ಗೂ ಅಧಿಕ ಮಾರಾಟವಾಯಿತು. ಬ್ಯಾನರ್, ಫ್ಲೆಕ್ಟ್ಗಳ ಮುಕ್ತವಾಗಿ ಜಾತ್ರೆ ನಡೆದಿದ್ದು ವಿಶೇಷ.
ಪ್ರತಿವರ್ಷ ಇಲ್ಲಿನ ಜಾತ್ರೆಯ ಕೊನೆಯ ದಿನ ದೇವವಾಣಿಯಾಗುತ್ತವೆ. ಈ ಬಾರಿ ದೇವವಾಣಿ ನುಡಿದ ದೇವಋಷಿ ಭರಮಾ ದನವಾಡೆ, ‘ಈ ವರ್ಷ ಅಲ್ಲಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ. ಕೆಲವೆಡೆ ಭೂಕಂಪವೂ ಸಂಭವಿಸಲಿದೆ’ ಎಂದರು.
ವರ್ಷದಿಂದ ವರ್ಷಕ್ಕೆ ಕೆರೂರಿನ ಜಾತ್ರೆ ವೈಭವದಿಂದ ನಡೆಯುತ್ತಿದೆ. ಐದು ದಿನಗಳ ಜಾತ್ರೆ ನೋಡುವುದೇ ಚಂದ. ಅದರಲ್ಲೂ ಕೊನೆಯ ದಿನದ ಭಂಡಾರದ ಓಕುಳಿ ಕಣ್ತುಂಬಿಕೊಳ್ಳುವುದೇ ಹಬ್ಬ