ಬೆಂಗಳೂರು: ‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ’ ಎಂದು ಬಿಜೆಪಿ ರಾಜ್ಯ ಒಬಿಸಿ ಮೋರ್ಚಾದ ಉಪಾಧ್ಯಕ್ಷ ಶಾಮಸುಂದರ್ ಗಾಯಕವಾಡ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 50 ಲಕ್ಷ ಜನಸಂಖ್ಯೆಯಿರುವ ಮರಾಠ ಸಮುದಾಯಕ್ಕೆ ಬಿಜೆಪಿ ಸರಿಯಾದ ಪ್ರಾತಿನಿಧ್ಯ ನೀಡುತ್ತಿಲ್ಲ.
ರಾಜ್ಯದಲ್ಲಿ ಶೇ 52ರಷ್ಟು ಜನಸಂಖ್ಯೆ ಹೊಂದಿರುವ ಹಿಂದುಳಿದ ವರ್ಗದ ಕುರುಬರು, ನೇಕಾರರು, ಗೊಲ್ಲರು, ಮೀನುಗಾರರು, ತಿಗಳರು, ಗಾಣಿಗರು, ಕುಂಬಾರರು, ಮಡಿವಾಳ, ದೇವಾಡಿಗ ಸಮುದಾಯದವರಿಗೆ ಟಿಕೆಟ್ ನೀಡದೇ ಅನ್ಯಾಯ ಮಾಡಿದೆ. ವೀರಶೈವರು, ಬ್ರಾಹ್ಮಣರಿಗೆ ಮಾತ್ರ ಬಿಜೆಪಿ ಎನ್ನುವ ಪರಿಸ್ಥಿತಿ ಇದೆ’ ಎಂದು ದೂರಿದರು.
ರಾಷ್ಟ್ರೀಯ ಮರಾಠ ಪಾರ್ಟಿ ಅಧ್ಯಕ್ಷರಾದ ಮನೋಹರ್ ರಾವ್ ಜಾಧವ್, ‘ರಾಜ್ಯದ 10 ಲೋಕಸಭಾ ಕ್ಷೇತ್ರಗಳಿಂದ ರಾಷ್ಟ್ರೀಯ ಮರಾಠ ಪಾರ್ಟಿಯ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಶಾಮಸುಂದರ್ ಗಾಯಕವಾಡ್ (ಉತ್ತರ ಕನ್ನಡ), ಜಿ.ಡಿ. ಘೋರ್ಪಡೆ (ಧಾರವಾಡ), ನಾರಾಯಣ್ ರಾವ್ ಗಾಯಕವಾಡ್ (ಹಾವೇರಿ-ಗದಗ), ಈಶ್ವರ್ ರುದ್ಧಪ್ಪ ಗಾಡಿ (ಬೆಳಗಾವಿ), ವಿನೋದ್ ಸಾಳುಂಕೆ (ಚಿಕ್ಕೋಡಿ), ವಿಜಯಕುಮಾರ್ ಪಾಟೀಲ್ (ಬೀದರ್), ಶ್ರೀಕಾಂತ್ ಮುಧೋಳ (ಬಾಗಲಕೋಟೆ), ಎಂ.ಡಿ. ದೇವರಾಜ್ ಸಿಂಧೆ (ಶಿವಮೊಗ್ಗ), ವಿಜಯಪುರ ಮತ್ತು ಕಲಬುರಗಿಯಲ್ಲಿ ಎಸ್.ಸಿ. ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ’ ಎಂದು ತಿಳಿಸಿದರು.