ಮುಂಬೈ: ಕಳೆದ ಎಂಟು ತಿಂಗಳಿಂದ ದೇವಸ್ಥಾನಗಳಿಗೆ ಸಾರ್ವಜನಿಕರ ದರ್ಶನಕ್ಕೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸುವ ಕುರಿತು ಮಹಾರಾಷ್ಟ್ರ ಸರ್ಕಾರ ಕಡೆಗೂ ಆದೇಶ ಹೊರಡಿಸಿದ್ದು, ನವೆಂಬರ್ 16ರಿಂದ ತೆರೆಯುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಫೇಸ್ ಮಾಸ್ಕ್, ಸಾಮಾಜಿಕ ಅಂತರ ಸೇರಿದಂತೆ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ದೇವರ ದರ್ಶನ ಪಡೆಯಬಹುದಾಗಿದೆ. ಈ ಮೂಲಕ ಬರೋಬ್ಬರಿ ಎಂಟು ತಿಂಗಳ ಬಳಿಕ ಮಹಾರಾಷ್ಟ್ರದಲ್ಲಿ ದೇವಸ್ಥಾನಗಳನ್ನು ತೆರೆಯಲಾಗುತ್ತಿದೆ. ಮಾರ್ಚ್ 22ರಂದು ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಘೋಷಿಸಿದ ಬಳಿಕ ದೇವಸ್ಥಾನಗಳನ್ನು ಬಂದ್ ಮಾಡಲಾಗಿತ್ತು.
ವಾರಗಳ ಹಿಂದೆಯೇ ಬಹುತೇಕ ರಾಜ್ಯಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಕೊರೊನಾ ಸೋಂಕು ಹರಡುವ ಭೀತಿಯಿಂದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ದೇವಸ್ಥಾನಗಳನ್ನು ತೆರೆದಿರಲಿಲ್ಲ. ಈ ಹಿಂದೆ ವಿರೋಧ ಪಕ್ಷಗಳು ದೇವಸ್ಥಾನ ತೆರೆಯುವಂತೆ ಪ್ರತಿಭಟನೆ ಸಹ ನಡೆಸಿದ್ದವು. ಆದರೂ ಸರ್ಕಾರ ತೆರೆದಿರಲಿಲ್ಲ. ಅಂತಿಮವಾಗಿ ಇದೀಗ ಆದೇಶ ಮಹಾರಾಷ್ಟ್ರ ಸರ್ಕಾರ ಹೊರಡಿಸಿದೆ.
ಶೀಘ್ರವೇ ಧಾರ್ಮಿಕ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಈ ಹಿಂದೆ ಉದ್ಧವ್ ಠಾಕ್ರೆ ತಿಳಿಸಿದ್ದರು. ಅಲ್ಲದೆ ದೀಪಾವಳಿ ಬಳಿಕ 9-12ನೇ ತರಗತಿಯ ಶಾಲಾ, ಕಾಲೇಜುಗಳನ್ನು ಸಹ ಆರಂಭಿಸುವುದಾಗಿ ತಿಳಿಸಿದ್ದರು. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದ ಉದ್ಧವ್, ಕೊರೊನಾ ಹಿನ್ನೆಲೆ ನಾವು ಮುನ್ನೆಚ್ಚರಿಕೆ ವಹಿಸಿದ್ದೇವೆ. ಧಾರ್ಮಿಕ ಕೇಂದ್ರಗಳನ್ನು ತೆರೆದರೆ ಜನ ಸರತಿಯಲ್ಲಿ ನಿಲ್ಲಬೇಕಾಗುತ್ತದೆ. ಇದರಿಂದ ಕೊರೊನಾ ಹರಡುತ್ತದೆ. ನಾನು ಎಲ್ಲ ಟೀಕೆಗಳನ್ನು ಎದುರಿಸಲು ಸಿದ್ಧನಿದ್ದೇನೆ. ಒಂದು ವೇಳೆ ಕೊರೊನಾ ಪ್ರಕರಣಗಳು ಇನ್ನೂ ಹೆಚ್ಚಾದರೆ ಟೀಕೆ ಮಾಡುವವರು ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ ಎಂದು ದೇವಾಲಯ ತೆರೆಯದ್ದಕ್ಕೆ ಸ್ಪಷ್ಟನೆ ನೀಡಿದ್ದರು.