ಬೆಳಗಾವಿ: ‘ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗವನ್ನು ಪುನರ್ ರಚಿಸಲಾಗುವುದು. ಅದಕ್ಕೂ ಮುನ್ನ, ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಕಚೇರಿ ಆರಂಭಿಸಲಾಗುವುದು. ಆಯೋಗದ ಒಬ್ಬ ಸದಸ್ಯ ಇಲ್ಲಿದ್ದು ಜನರ ಕುಂದುಕೊರತೆಗೆ ಸ್ಪಂದಿಸಲಿದ್ದಾರೆ’ ಎಂದು ಆಯೋಗದ ಅಧ್ಯಕ್ಷ ಶಿವರಾಜ್ ಪಾಟೀಲ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಸ್ತುತ ಇರುವ ಆಯೋಗ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಹಾಗಾಗಿ ರಾಜ್ಯದ ವಿವಿಧೆಡೆಯ ಸದಸ್ಯರನ್ನು ಸೇರಿಸಿ, ನಾಲ್ಕೇ ತಿಂಗಳಲ್ಲಿ ಪುನರ್ ರಚಿಸಲಾಗುವುದು. ಬೆಳಗಾವಿಯ ಆಸಕ್ತರಿಗೆ ಅವಕಾಶ ಕಲ್ಪಿಸಲಾಗುವುದು’ ಎಂದರು.
‘ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಆಯೋಗದ ಸದಸ್ಯರು ಮತ್ತು ಸಿಬ್ಬಂದಿ ಲಭ್ಯವಿರುತ್ತಾರೆ. ಆಯೋಗಕ್ಕಾಗಿ ಜಿಲ್ಲಾಡಳಿತದಿಂದ ಎರಡು ಕೊಠಡಿ ಸಿಗಲಿವೆ. ಮುಂದಿನ ದಿನಗಳಲ್ಲಿ ಆಯೋಗದ ಪ್ರಾದೇಶಿಕ ಕಚೇರಿ ಸ್ಥಾಪಿಸುವ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದರು.