ಬೆಳಗಾವಿ, : ಮಹಾರಾಷ್ಟ್ರದ ಜತ್ತ ತಾಲೂಕಿನ ರೈತ ಮುಖಂಡರ ನಿಯೋಗವು ಬೆಳಗಾವಿಯ (Belagavi) ಅಥಣಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಭೇಟಿಯಾಗಿ ನೀರಿನ ಸಮಸ್ಯೆ ಸರಿಪಡಿಸುವಂತೆ ಮನವಿ ಪತ್ರವನ್ನು ಸಲ್ಲಿಸದೆ.
ನೀರಾವರಿ ಭರವಸೆ ನೀಡಿದರೆ ಕರ್ನಾಟಕಕ್ಕೆ ಸೇರಲು ಸಿದ್ಧ ಎಂದು ಅವರು ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರದ ಗಡಿ ಗ್ರಾಮಗಳ ಹೊಲಗಳಿಗೆ ರಾಜ್ಯದ ನೀರಾವರಿ ಯೋಜನೆಗಳಿಂದ ಸ್ವಲ್ಪ ನೀರು ಬಿಡುವಂತೆ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ದಯವಿಟ್ಟು ನಮಗೆ ನೀರು ಕೊಡಿ ಅಥವಾ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಜತ್ತ ತಾಲೂಕಿನ ಸುಮಾರು 40 ಗ್ರಾಮಗಳು ತೀವ್ರ ನೀರಿನ ಕೊರತೆಯಿಂದ ಬಳಲುತ್ತಿವೆ.
ಬಿಕ್ಕಟ್ಟಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಾವು ಪದೇ ಪದೇ ಮಾಡಿದ ಮನವಿಯನ್ನು ನಿರ್ಲಕ್ಷಿಸಲಾಗಿದೆ. ಇಡೀ ತಾಲೂಕು ಬರಪೀಡಿತವಾಗಿದ್ದರೂ ಮಹಾರಾಷ್ಟ್ರ ಸರಕಾರ ಬರಪೀಡಿತ ಎಂದು ಘೋಷಿಸುವಲ್ಲಿ ವಿಫಲವಾಗಿದೆ ಎಂದು ನಿಯೋಗ ಆರೋಪಿಸಿದೆ.ಜತ್ತ ತಾಲೂಕಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಸುಮಾರು 60 ಟ್ಯಾಂಕರ್ಗಳನ್ನು ಮಾತ್ರ ಬಳಸಲಾಗುತ್ತಿದೆ. ವಿಶೇಷ ನೀರಾವರಿ ಯೋಜನೆಯನ್ನು ನಿರ್ಮಿಸುವ ಮೂಲಕ ಜತ್ತ ತಾಲೂಕಿನ ನೀರಿನ ಕೊರತೆಯನ್ನು ನೀಗಿಸಲು ಸರ್ಕಾರಗಳು ನೀಡಿದ ಭರವಸೆಗಳು ಈಡೇರಿಲ್ಲ. ಆದ್ದರಿಂದ, ಜತ್ತ ತಾಲೂಕಿನ ರೈತರೊಂದಿಗೆ ತುಬಚಿ ಬಬಲೇಶ್ವರ ಅಥವಾ ಕೊಟ್ಟಲಗಿ ಯೋಜನೆಗಳಂತಹ ಯೋಜನೆಗಳಿಂದ ಸ್ವಲ್ಪ ನೀರನ್ನು ಹಂಚಿಕೊಳ್ಳಲು ನಾವು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಮನವಿ ಮಾಡಿದೆ.