ಯಲ್ಲಮ್ಮನಗುಡ್ಡ (ಬೆಳಗಾವಿ ಜಿಲ್ಲೆ): ಇಲ್ಲಿನ ಯಲ್ಲಮ್ಮನ ಸನ್ನಿಧಾನದಲ್ಲಿ ಶನಿವಾರ ಅಪಾರ ಸಂಖ್ಯೆ ಭಕ್ತಾದಿಗಳ ಸಮ್ಮುಖದಲ್ಲಿ ಭಾರತ ಹುಣ್ಣಿಮೆ ಜಾತ್ರೆ ಸಡಗರದಿಂದ ನೆರವೇರಿತು.
ಕೋವಿಡ್ ಮತ್ತು ಬರಸ್ಥಿತಿಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಜಾತ್ರೆ ಸಂಭ್ರಮ ಕಳೆಗುಂದಿತ್ತು.
ಈಗ ಮತ್ತೆ ವೈಭವ ಮರುಕಳಿಸಿದೆ. ಕೆಲವರು ಚಕ್ಕಡಿಗಳಲ್ಲಿ, ಇನ್ನೂ ಕೆಲವರು ಕಾಲ್ನಡಿಗೆಯಲ್ಲಿ ಗುಡ್ಡಕ್ಕೆ ಬಂದರು. ಯಲ್ಲಮ್ಮ ದೇವಸ್ಥಾನ, ಸುತ್ತಲಿನ ದೇಗುಲಗಳಲ್ಲಿ ಕಾರ್ಯಕ್ರಮ ನಡೆದವು.
ಕರ್ನಾಟಕದ ಜಿಲ್ಲೆಗಳಲ್ಲದೇ, ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಿಂದಲೂ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು, ಜಗದಾಂಬೆ ರೇಣುಕೆಗೆ ಭಕ್ತಿಯಿಂದ ನಮಿಸಿದರು.
ನಸುಕಿನ 4ರಿಂದಲೇ ದೇಗುಲದ ಸರದಿಯಲ್ಲಿ ನಿಂತು ದರ್ಶನ ಪಡೆದರು. ಯಲ್ಲಮ್ಮನಿಗೆ ಜೈಕಾರ ಕೂಗಿ, ಭಂಡಾರ ಹಾರಿಸಿ ಖುಷಿಪಟ್ಟರು. ಹೂರಣದಿಂದ ಹೋಳಿಗೆ, ಕಡಬು ಸೇರಿ ವಿವಿಧ ಆಹಾರ ಖಾದ್ಯ ಸಿದ್ಧಪಡಿಸಿ, ಹಡ್ಡಲಗಿ ತುಂಬಿದರು. ಬಳೆಗಳ ವ್ಯಾಪಾರವು ಜೋರಿತ್ತು.
ಭಾರತ ಹುಣ್ಣಿಮೆ ಪ್ರಯುಕ್ತ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿ ಶನಿವಾರ ನಡೆದ ಜಾತ್ರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು