ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನಗುಡ್ಡದಲ್ಲಿ ನಡೆಯುವ ಜಾತ್ರೆಯಲ್ಲಿ ಯಲ್ಲಮ್ಮ ದೇವಸ್ಥಾನದಿಂದ ಪಶ್ಚಿಮ ದಿಕ್ಕಿಗೆ ಕಣ್ಣು ಹಾಯಿಸಿದರೆ ವೈವಿಧ್ಯಮಯ ಬಣ್ಣ ಬಣ್ಣದ ಬಳೆಗಳ ಮಾರಾಟ ಕಂಡುಬರುತ್ತದೆ. ಹಿಂದೆ ‘ಬಳೆಕಟ್ಟೆ’ ಎಂದು ಕರೆಯಲಾಗುತ್ತಿದ್ದ ಸ್ಥಳವೀಗ ‘ಬಳೆಪೇಟೆ’ ಆಗಿದೆ.
ನೂರಾರು ಕುಟುಂಬಗಳು ದಶಕಗಳಿಂದ ಬಳೆ ಮಾರಾಟ ಮಾಡುತ್ತ ಬಂದಿವೆ. ಈಗೀಗ ಮಾರುಕಟ್ಟೆಯಲ್ಲಿ ಜಾಗ ಸಾಲದ್ದಕ್ಕೆ ಗುಡ್ಡದ ಪರಿಸರದಲ್ಲಿ ಎಲ್ಲೆಂದರಲ್ಲಿ ಬಳೆಗಳ ಮಾರಾಟ ನಡೆಯುತ್ತದೆ. ಹುಣ್ಣಿಮೆ ಸಮೀಪಿಸುತ್ತಲೇ ಎಲ್ಲ ಅಂಗಡಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತದೆ. ಬಳೆಗಳನ್ನು ಒಪ್ಪ-ಓರಣವಾಗಿ ಜೋಡಿಸಲಾಗುತ್ತದೆ. ದೇವಸ್ಥಾನದ ಪಶ್ಚಿಮ ಮತ್ತು ಉತ್ತರದಿಕ್ಕಿನಲ್ಲಿರುವ ವ್ಯಾಪಾರಿಗಳು ವರ್ಷವಿಡೀ ಬಳೆ ಮಾರುತ್ತಾರೆ. ಉಳಿದವರು ಜಾತ್ರೆಗೆ ಮಾತ್ರ ಬಂದು ವ್ಯಾಪಾರ ಮಾಡಿ ಮರಳುತ್ತಾರೆ.
ಈ ಜಾತ್ರೆಯಲ್ಲಿ ಬಳೆಗಳದ್ದೇ ವಿಶೇಷ. ಇದಕ್ಕೆ ಧಾರ್ಮಿಕ, ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಕಾರಣಗಳಿವೆ. ಇಲ್ಲಿ ವರ್ಷದ ಹನ್ನೆರಡು ಹುಣ್ಣಿಮೆಗಳಲ್ಲೂ ಜಾತ್ರೆ ನಡೆಯುತ್ತದೆ. ಅದರಲ್ಲಿ ಹೊಸ್ತಿಲ ಹುಣ್ಣಿಮೆ ಹೊರತುಪಡಿಸಿ, 11 ಹುಣ್ಣಿಮೆಗಳಲ್ಲಿ ಬಳೆ ಮಾರಾಟವಾಗುತ್ತದೆ. ಹೊಸ್ತಿಲ ಹುಣ್ಣಿಮೆ ದಿನ ದೇವಿ ವಿಧವೆ ಆಗುತ್ತಾಳೆ. ಭಾರತ ಹುಣ್ಣಿಮೆಗೆ ಮತ್ತೆ ಮುತ್ತೈದೆ ಆಗುತ್ತಾಳೆ. ಇದೇ ಕಾರಣಕ್ಕೆ ಮಹಿಳೆಯರು ತಾವೂ ನಿತ್ಯ ಮುತ್ತೈದೆ ಆಗಬೇಕೆಂಬ ಬಯಕೆಯಿಂದ ಇಲ್ಲಿ ಬಳೆ ಖರೀದಿಗೆ ಮುಂದಾಗುತ್ತಾರೆ.
ಭಾರತ ಹುಣ್ಣಿಮೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಳೆಗಳ ವ್ಯಾಪಾರ ನಡೆಯುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಗುಜರಾತ್ ಸೇರಿದಂತೆ ದೇಶದ ನಾನಾ ಭಾಗಗಳಿಂದ ಮಹಿಳೆಯರು ಇಲ್ಲಿಗೆ ಬರುತ್ತಾರೆ. ತಮ್ಮಿಷ್ಟದ ಬಳೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ಭಾರತ ಹುಣ್ಣಿಮೆಯಲ್ಲಿ ದೇವಿಗೆ ಬಳೆ, ಕಂಕಣ, ಮಡಿ, ಕುಂಕುಮ-ಭಂಡಾರದಂಥ ಮಂಗಳಕರ ವಸ್ತುಗಳನ್ನು ನೀಡಿದರೆ ತಮಗೆ ಭಾಗ್ಯ ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆ.