ರಾಮದುರ್ಗ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಈ ಬಾರಿ ಎಸ್ಸಿ/ಎಸ್ಟಿ ಸಮುದಾಯದ ಅನಂತಕುಮಾರ ಬ್ಯಾಕೋಡ ಅವರಿಗೆ ನೀಡಬೇಕು ಎಂದು ಪಕ್ಷದ ಎಸ್ಸಿ/ಎಸ್ಟಿ ಘಟಕದ ಉಪಾಧ್ಯಕ್ಷೆ ಲಕ್ಷ್ಮೀ ನಾಗಣ್ಣವರ ವರಿಷ್ಠರನ್ನು ಒತ್ತಾಯಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪರಿಶಿಷ್ಟ ಜಾತಿಯವರಿಗೆ 50 ವರ್ಷಗಳಿಂದಲೂ ಟಿಕೆಟ್ ನೀಡಿಲ್ಲ.
ಸುಮಾರು 6 ಲಕ್ಷ ಮತಗಳಿದ್ದರೂ ಈ ಜನಾಂಗಕ್ಕೆ ವಿಧಾನ ಪರಿಷತ್, ವಿಧಾನಸಭೆ ಮತ್ತು ನಿಗಮ ಮಂಡಳಿಗೂ ಪರಿಗಣಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಒಂದು ವೇಳೆ ಪರಿಶಿಷ್ಷರಿಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ದರೆ ಚುನಾವಣೆಯಲ್ಲಿ ನಮ್ಮ ನಿರ್ಧಾರ ಏನು ಎಂಬುದನ್ನು ಚರ್ಚೆ ಮಾಡಿ ನಿರ್ಧರಿಸಬೇಕಾಗುತ್ತದೆ’ ಎಂದರು.
ಎಸ್ಸಿ/ಎಸ್ಟಿ ಕಾಂಗ್ರೆಸ್ ಜಿಲ್ಲಾ ಮೋರ್ಚಾ ಉಪಾಧ್ಯಕ್ಷ ರಮೇಶ ರಜಪೂತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಮದರಂಗಿ, ಸಾಗರ ಮುನವಳ್ಳಿ, ದಲಿತ ಮುಖಂಡ ಬಿ.ಆರ್. ದೊಡಮನಿ, ಧರ್ಮಪ್ಪ ಮಾದರ ಇದ್ದರು.