ಬೆಂಗಳೂರು, ಫೆ.20: ಕಾಂಗ್ರೆಸ್ ಸರ್ಕಾರ ನುಡಿದಂತೆಯೇ ತನ್ನ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ (Congress Guarantee) ಯೋಜನೆಗಳಿಗೆ ಚಾಲನೆ ನೀಡಿದೆ. ಡಿಗ್ರಿ ಹಾಗೂ ಡಿಪ್ಲೋಮಾ ಕಂಪ್ಲೀಟ್ ಆದ ಯುವಕ, ಯುವತಿಯರಿಗೋಸ್ಕರ ಇದೀಗ 5 ನೇ ಯೋಜನೆಯಾದ ಯುವ ನಿಧಿ ಯೋಜನೆಗೆ (Yuva Nidhi Scheme) ಡಿಸೆಂಬರ್ ತಿಂಗಳ 26 ರಂದು ಚಾಲನೆ ದೊರೆತು ತಿಂಗಳುಗಳೆ ಕಳೆದಿವೆ. ಆದರೆ ಇನ್ನೂ ಕೆಲ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಬಾರದೇ ಯುವನಿಧಿಯಿಂದ ಕಾದು ಕಾದು ಸುಸ್ತಾದ ಪದವೀಧರರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪೈಕಿ 5 ನೇ ಗ್ಯಾರಂಟಿ ಯೋಜನೆ ಯುವನಿಧಿ. ಕಳೆದ ಡಿಸೆಂಬರ ತಿಂಗಳ 26ರಂದು ಸಿಎಂ ಸಿದ್ಧರಾಮಯ್ಯ ಬೆಂಗಳೂರಿನಲ್ಲಿ ಯುವನಿಧಿಗೆ ಚಾಲನೆ ನೀಡಿದ್ರು. ಜನವರಿ 12ರಂದು ವಿವೇಕಾನಂದ ಜಯಂತಿಯಂದು ಶಿವಮೊಗ್ಗದಲ್ಲಿ ಯುವನಿಧಿ ಹಣ ಖಾತೆಗೆ ವರ್ಗಾವಣೆಗೆ ಚಾಲನೆಯನ್ನ ನೀಡಿದ್ರು, ನಿರುದ್ಯೋಗಿ ಪದವೀಧರರಿಗೆ ರೂ 3,000 ರೂಪಾಯಿ ಮತ್ತು ನಿರುದ್ಯೋಗಿ ಡಿಪ್ಲೋಮಾದಾರರಿಗೆ ರೂ 1,500 ರೂಪಾಯಿ, ಆದರೆ ಯುವನಿಧಿ ನೋಂದಣಿ ಮಾಡಿದ ಕೆಲ ಫಲಾನುಭವಿಗಳಿಗೆ ಹಣ ಸರಿಯಾಗಿ ತಲುಪಿಲ್ಲ. ಜನವರಿ ತಿಂಗಳಲ್ಲಿ ಯುವನಿಧಿ ಫಲಾನುಭವಿಗಳ ಅಕೌಂಟ್ಗೆ ಹಣ ಬರಬೇಕಿತ್ತು. ಆದರೆ ಇನ್ನೂ ಕೂಡ ಖಾತೆಗೆ ಬಂದಿಲ್ಲ. ಕೆಲ ಪದವೀಧರರು ಸೇವಾ ಸಿಂಧು ಪೊರ್ಟಲ್ ಗಳಲ್ಲಿ ತಾಂತ್ರಿಕ ದೋಷ ಇದ್ದರು ಅಪ್ಲಿಕೇಷನ್ ಹಾಕಿದ್ದೇವೆ ನಮ್ಮ ಜೊತೆಗೆ ಇರುವ ಎಷ್ಟೋ ಜನರಿಗೆ ಬಂದಿದೆ ನಮಗೆ ಬಂದಿಲ್ಲ. ಸಿಟಿಯಲ್ಲಿರುವ ನಮಗೆ ಇಷ್ಟು ತೊಂದರೆ ಆಗುತ್ತಿದೆ ಹಳ್ಳಿಯಲ್ಲಿರುವ ಯುವಕರಿಗೆ ಎಷ್ಟು ತೊಂದರೆ ಆಗಬಹುದು ಹಾಗಾಗಿ ತಾಂತ್ರಿಕ ದೋಷ ಸರಿಪಡಿಸಿ ನಮಗೆ ಪ್ರಾಮಾಣಿಕವಾಗಿ ಹಣ ಬರುವಂತೆ ಮಾಡಬೇಕು ಅಂತ ಪದವೀಧರ ಯುವಕರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.