ವಿಧಾನಸಭೆ ಚುನಾವಣೆಯಲ್ಲಿ ಎದುರಾದ ಸೋಲಿನಿಂದ ಮಂಕಾಗಿದ್ದ ಬಿಜೆಪಿ ಈಗ ಅಡಿಗಡಿಗೂ ಪ್ರತಿ ಹೋರಾಟದ ಉತ್ಸಾಹದಲ್ಲಿ ಕಂಗೊಳಿಸಲಾರಂಭಿಸಿದೆ. ಇದಕ್ಕೆ ಕಾರಣವಾಗಿರುವುದು ಪಕ್ಷದ ಚುಕ್ಕಾಣಿ ಹಿಡಿದ ಬಿ.ವೈ. ವಿಜಯೇಂದ್ರ ಎಂದರೆ ಅತಿಶಯೋಕ್ತಿಯಲ್ಲ. ಎದುರಾಳಿಗಳ ರಾಜಕೀಯ ಟೀಕೆಗೆ ಸಮರ್ಥವಾಗಿ ಉತ್ತರ ನೀಡದ ಸ್ಥಿತಿಯಲ್ಲೂ ಇಲ್ಲದ ಪರಿಸ್ಥಿತಿಯಿಂದ ಹೊರತಂದ ವಿಜಯೇಂದ್ರ ಅವರು ಕಾರ್ಯಕರ್ತರ ಪಡೆಯಲ್ಲಿ ಉತ್ಸಾಹ ತುಂಬಿ, ಮುಖಂಡರಲ್ಲಿ ಭರವಸೆ ಹುಟ್ಟಿಸಿದ್ದಾರೆ.
ಅಂದ ಹಾಗೆ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು ಇದೀಗ ನೂರು ದಿನ ಕಳೆದಿದೆ. ಈ ದಿನದಲ್ಲಿ ರಾಜಕೀಯವಾಗಿ ಸಂಚಲನವಂತೂ ಮೂಡಿದೆ. ಎದುರಾಳಿಗಳು ಇವರ ನಡೆಯನ್ನು ಗಮನಿಸುವ ಪರಿಸ್ಥಿತಿ ನೋಡಿದರೆ ಇವರ ಸಾಮರ್ಥ್ಯ ಕಡೆಗಣಿಸುವಂತಿಲ್ಲ ಎಂಬ ಸ್ಪಷ್ಟ ಅರಿವಿದ್ದಂತಿದೆ.
ಇಡೀ ಘಟಕದ ಸೇನಾನಿಯಾಗುವ ಅವಕಾಶ ಸಿಕ್ಕಿತೆಂದು ಸುಮ್ಮನೆ ಕೂರಲಿಲ್ಲ, ತಮ್ಮ ವಿಧಾನಸಭಾ ಕ್ಷೇತ್ರಕ್ಕೂ ಸೀಮಿತವಾಗಲಿಲ್ಲ. ಬದಲಿಗೆ ರಾಜ್ಯದ ಉದ್ದಗಲಕ್ಕೂ ಓಡಾಡಿದರು, ಪಕ್ಷದ ಜಿಲ್ಲಾ ಘಟಕಗಳನ್ನು ಸಕ್ರಿಯಗೊಳಿಸಿದರು, ಭರವಸೆ ತುಂಬಿದರು. ಅವರ ಓಡಾಟ ಯಾವ ಪರಿ ಇತ್ತೆಂದರೆ 100 ದಿನಗಳಲ್ಲಿ 29 ಜಿಲ್ಲೆ ಹತ್ತು ಸಾವಿರ ಕಿಲೋಮೀಟರ್ಗೂ ಹೆಚ್ಚಿದೆ. ಬಿಜೆಪಿ ಹಳೆಯ ಪರಂಪರೆ ನೆನಪಿಸುವಂತೆ ಅವರ ಪ್ರವಾಸರೂಪುಗೊಂಡಿದ್ದು ವಿಶೇಷ. ಜಿಲ್ಲಾ ಭೇಟಿ ವೇಳೆ ಬೂತ್ ಅಧ್ಯಕ್ಷರ ಮನೆಗೆ ತೆರಳಿ ಅವರಿಗೆ ಸನ್ಮಾನ ಮಾಡಿ, ಮನೆಯಲ್ಲೇ ಊಟ, ಉಪಾಹಾರ ಸೇವಿಸುವ ಮೂಲಕ ಕಾರ್ಯಕರ್ತರಿಗೆ ಹತ್ತಿರವಾಗಿದ್ದಾರೆ.
ಪಕ್ಷಕ್ಕೆ ಅಧಿಕಾರ ಸಿಕ್ಕ ಕೂಡಲೇ ನಾಯಕರು ದೊಡ್ಡವರಾದರೂ ಪಕ್ಷದೊಳಗಿನ ಚರ್ಚೆಗೆ ಈ ಮೂಲಕ ವಿರಾಮ ಹಾಕಿದ್ದಾರೆ. ನಾನು ನಿಮ್ಮವನು, ನಿಮ್ಮಂತೆಯೇ ಪಕ್ಷಕ್ಕೆ ದುಡಿಯುವ ಕಾರ್ಯಕರ್ತ ಎಂದು ತಿಳಿಯಪಡಿಸಿದ್ದಾರೆ. ಅಲ್ಲದೆ ಬೂತ್ನಲ್ಲಿ ನಾವು ಗಟ್ಟಿಯಾಗಬೇಕೆಂಬ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಷಾ ಅವರ ಆಶಯಕ್ಕೆ ಪೂರಕವಾಗಿ ಪ್ರಾಮುಖ್ಯತೆ ನೀಡಲಾರಂಭಿಸಿದ್ದಾರೆ. ಪಕ್ಷದ ಕೊನೆಯ ಕೊಂಡಿ ಬೂತ್, ಆ ಬೂತ್ಗೆ ರಾಜ್ಯಾಧ್ಯಕ್ಷರು ಬರುತ್ತಾರೆಂದರೆ ಸಹಜವಾಗಿ ಸಂಚಲನ ಮೂಡುತ್ತದೆ, ಬೂತ್ ಘಟಕದ ಸದಸ್ಯರಿಗೂ ಹುರುಪು ಬರುತ್ತದೆ. ನೆರೆ-ಹೊರೆ ಬೂತ್ ಮೇಲೂ ಈ ಭೇಟಿಯ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಪಕ್ಷದ ತಳಮಟ್ಟದಲ್ಲಿ ಕಂಪನ ಎದ್ದು ಕಾಣಿಸುತ್ತಿದೆ.