ಮೈಸೂರು, ಫೆಬ್ರವರಿ 19: ಆಸ್ತಿಗಾಗಿ ಮೊದಲ ಹೆಂಡತಿ ಮಕ್ಕಳ ಜೊತೆ ಸೇರಿ ಎರಡನೇ ಪತ್ನಿಯನ್ನು ವ್ಯಕ್ತಿಯೊಬ್ಬ ಹತ್ಯೆ (Murder) ಮಾಡಿದ ದಾರುಣ ಘಟನೆ ಮೈಸೂರಿನ (Mysuru)ನಾಯ್ಡುನಗರದಲ್ಲಿ ನಡೆದಿದೆ. ಇದೀಗ ಕೃತ್ಯಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಅಖಿಲಾ ಭಾನು (46) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಆರೋಪಿ ಪತಿ ಅಬ್ಬ ಥಾಯೂಬ್, ಆತನ ಮೊದಲನೇ ಹೆಂಡತಿಯ ಮಕ್ಕಳಾದ ಮೊಹಮದ್ ಆಸಿಫ್, ಮೊಹಮದ್ ಥೋಸಿಫ್ ಹಾಗೂ ಮೊಹಮದ್ ಹೈದರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಅಬ್ಬ ಥಾಯೂಬ್ ಸಿಲ್ಕ್ ಫ್ಯಾಕ್ಟರಿಯಲ್ಲಿ ನೌಕರನಾಗಿದ್ದ. 2013 ರಲ್ಲಿ ಅಖಿಲಾ ಭಾನುರನ್ನು ಎರಡನೇ ವಿವಾಹವಾಗಿದ್ದ. ಆತನಿಗೆ ಮೊದಲ ಹೆಂಡತಿಯಲ್ಲಿ ನಾಲ್ವರು ಮಕ್ಕಳಿದ್ದರು. ಎರಡನೇ ಪತ್ನಿ ಅಖಿಲಾ ಭಾನು ಕ್ಯಾನ್ಸರ್ನಿಂದ ಬಳಲುತ್ತಿದ್ದು ಗುಣಮುಖರಾಗಿದ್ದರು. ಆಕೆಗೆ ಮಕ್ಕಳಿರಲಿಲ್ಲ. ಇತ್ತೀಚೆಗೆ ಅಖಿಲಾ ಭಾನು ಅವರ ಅಕ್ಕನ ಮಗ ಸೈಯದ್ ಇರ್ಫಾನ್ ಆಕೆಗಾಘಿ ನಾಯ್ಡುನಗರದಲ್ಲಿ ಆರ್ಥಿಕ ನೆರವು ನೀಡಿ ಒಂದು ಮನೆ ಖರೀದಿಸಿಕೊಟ್ಟಿದ್ದರು. ಅಬ್ಬ ಥಾಯುಬ್ ಹಾಗೂ ಅಖಿಲಾ ಭಾನು ಇಬ್ಬರ ಹೆಸರಲ್ಲಿ ಮನೆಯ ಜಂಟಿ ನೋಂದಣಿಯಾಗಿತ್ತು. 6 ತಿಂಗಳ ಹಿಂದಷ್ಟೇ ಮನೆ ಖರೀದಿಯಾಗಿತ್ತು.