ಸವದತ್ತಿ: ತಾಲ್ಲೂಕಿನ ಹೂಲಿ ಗ್ರಾಮದ ಗುರು ಬಾಲಲೀಲಾ ಸಂಗಮೇಶ್ವರ ಸ್ವಾಮೀಜಿ 91ನೇ ಪುಣ್ಯ ಸ್ಮರಣೋತ್ಸವ ಹಾಗೂ ಹೂಲಿ ಅಜ್ಜನ ಮಠದ ಜಾತ್ರಾ ಮಹೋತ್ಸವದ ನಿಮಿತ್ತ ಗುರುವಾರ ರಥೋತ್ಸವ ಜರುಗಿತು.
ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಅಲಂಕೃತ ರಥದಲ್ಲಿ ಬಾಲಲೀಲಾ ಸಂಗಮೇಶ್ವರರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ, ವಿವಿಧ ವಾದ್ಯ ಮೇಳದೊಂದಿಗೆ ಅದ್ಧೂರಿ ರಥೋತ್ಸವ ಜರುಗಿತು.
ಸುತ್ತಲಿನ ಗ್ರಾಮಗಳ ಅಜ್ಜನ ಭಕ್ತರು ಆಗಮಿಸಿದ್ದರು. ಇಷ್ಟಾರ್ಥ ಸಿದ್ಧಿಗಾಗಿ ಉತ್ತತ್ತಿ, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ ಮೆರೆದರು. ರಥ ಎಳೆಯುತ್ತ ಭಕ್ತರು ‘ಹರಹರ ಮಹಾದೇವ’ ಎಂಬ ಘೋಷ ಮೊಳಗಿಸಿದರು.
ಗ್ರಾಮದಲ್ಲಿ ಕುಸ್ತಿ, ಟಗರಿನ ಕಾಳಗ, ಕುದುರೆ ಓಟ ಸೇರಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.