ಬೆಳಗಾವಿ: ‘ಕವಿ ಮತ್ತು ದಾರ್ಶನಿಕರಾಗಿದ್ದ ಮಹಾಯೋಗಿ ವೇಮನ ಅವರು ಸಮಾಜದಲ್ಲಿನ ಮೌಢ್ಯ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ನಿರಂತರವಾಗಿ ಶ್ರಮಿಸಿದ್ದರು’ ಎಂದು ಪ್ರೊ.ಸಿದ್ದಣ್ಣ ಲಂಗೋಟಿ ಸ್ಮರಿಸಿದರು.
ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವದಲ್ಲಿ ವೇಮನ ನಂಬಿಕೆ ಇಟ್ಟಿದ್ದರು. ಸಮಾಜದಲ್ಲಿ ತಾವು ಕಂಡ ಸತ್ಯವನ್ನು ಕಹಿಯಾದ ಭಾಷೆಯಲ್ಲಿ ಹಾಡಿ, ಜನರಲ್ಲಿ ಅರಿವಿನ ಬೀಜ ಬಿತ್ತಿದ್ದರು. ತಮ್ಮ ತತ್ವಪದಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದರು. ವೇಮನರ ತತ್ವ, ಸಿದ್ಧಾಂತ ಸರ್ವ ಸಮುದಾಯಕ್ಕೂ ತಲುಪಲಿ ಎಂಬ ಉದ್ದೇಶದಿಂದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ‘ಮಹಾಯೋಗಿ ವೇಮನ ಅಧ್ಯಯನ ಪೀಠ’ ಸ್ಥಾಪಿಸಲಾಗಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಧಾರವಾಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಜಿಲ್ಲಾ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರ, ಗೌರವಾಧ್ಯಕ್ಷೆ ಇಂದಿರಾಬಾಯಿ ಮಳಲಿ, ಉಪಾಧ್ಯಕ್ಷ ಕಾಂತು ಜಾಲಿಬೇರಿ, ಟಿ.ಕೆ.ಪಾಟೀಲ, ಮುಖಂಡರಾದ ಡಾ.ಗಿರೀಶ ಸೋಮವಾಳಕರ, ಮಂಜುನಾಥ ಪಾಟೀಲ, ಕಲ್ಯಾಣಮ್ಮ ಲಂಗೋಟಿ ಇದ್ದರು. ಸುನೀತಾ ದೇಸಾಯಿ ನಿರೂಪಿಸಿದರು.
ಇದಕ್ಕೂ ಮುನ್ನ ನಡೆದ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಜಯಕುಮಾರ ಹೊನಕೇರಿ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳ ಪ್ರದರ್ಶನ ಮನಸೆಳೆಯಿತು.