ವಿಜಯಪುರ, ಜ.18: ಅಯೋಧ್ಯೆಯಲ್ಲಿ ಶ್ರೀರಾಮೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ (Ayodhya Ram Mandir). ನಿನ್ನೆ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ವಿಗ್ರಹಣದ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು ಇಂದು ರಾಮನ ಮೂರ್ತಿ ಗರ್ಭಗುಡಿ ಪ್ರವೇಶಿಸಿದೆ. ಮತ್ತೊಂದೆಡೆ ವಿಜಯಪುರದ ಜ್ಞಾನಯೋಗಿ ಸಿದ್ದೇಶ್ವರಶ್ರೀ ಆಸ್ಪತ್ರೆಯಲ್ಲಿ (JSS Hospital) ಇಂದಿನಿಂದ ನಾಲ್ಕು ದಿನಗಳ ಕಾಲ ಉಚಿತ ಹೆರಿಗೆ ಘೋಷಣೆ ಮಾಡಲಾಗಿದೆ. ಇಂದಿನಿಂದ ಜನವರಿ 22ರವರೆಗೆ ಜನಿಸಿದ ನವಜಾತ ಶಿಶುಗಳನ್ನು ರಾಮ ಹಾಗೂ ಸೀತೆ ಪ್ರತಿರೂಪ ಎಂದು ಪರಿಗಣಿಸಿ ಉಚಿತ ಹೆರಿಗೆ ಯೋಜನೆ ಘೋಷಿಸಲಾಗಿದೆ. ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಧ್ಯಕ್ಷತೆಯ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನಿರ್ಮಿತ ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ. 22ರಂದು ಅಯೋಧ್ಯೆಯಲ್ಲಿ ಜರುಗಲಿರುವ ರಾಮಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಅಯೋಧ್ಯಾ ಸಂಭ್ರಮೋತ್ಸವನ್ನು ಆಚರಿಸುವ ಉದ್ದೇಶದಿಂದ ಉಚಿತ ಹೆರಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಗರ ಶಾಸಕರಾದ ಬಸನಗೌಡ ರಾ.ಪಾಟೀಲ್ ಯತ್ನಾಳ ಅವರ ಅಪೇಕ್ಷೆಯಂತೆ ಇಂದಿನಿಂದ ಜ.22ರ ವರೆಗೆ ಅಂದರೆ ಐದು ದಿನಗಳ ಕಾಲ ಜೆಎಸ್ಎಸ್ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಲ್ಲಿ ಹುಟ್ಟಿದ ಮಗುವನ್ನು ಶ್ರೀ ರಾಮ ಹಾಗೂ ಸೀತಾದೇವಿ ಪ್ರತಿರೂಪವೆಂದು ಪರಿಗಣಿಸಿ ಹೆರಿಗೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೆರವೇರಿಸಲಾಗುತ್ತದೆ.