ಚಿಕ್ಕಮಗಳೂರು: ನೈಸರ್ಗಿಕ ಸೌಂದರ್ಯದ ಖನಿಯಂತಿರೋ ಕಾಫಿನಾಡಲ್ಲೀಗ ಮುಂಗಾರು ಮಳೆ ಕೊಂಚ ಬಿಡುವು ಪಡೆದಿದೆ. ಆದರೆ ಮಳೆಯ ಹನಿಗಳ ಸಿಂಚನದಿಂದಾಗಿ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಚಂದ್ರದ್ರೋಣ ಪರ್ವತ ಶ್ರೇಣಿಯ ಸೆರಗಲ್ಲಿರೋ ಅಬ್ಬುಗುಡಿಗೆ ಫಾಲ್ಸ್ ನಿಸರ್ಗದ ನೈಜ ಸೌಂದರ್ಯವನ್ನೇ ಅನಾವರಣಗೊಳಿಸಿದೆ. ದಟ್ಟಕಾನನದ ನಡುವೆ ಬಂಡೆಗಳ ಮೇಲಿಂದ ಧುಮ್ಮಿಕ್ಕಿ ಹರಿಯುತ್ತಿರೋ ಜಲಪಾತವೀಗ ಅದ್ಭುತ ಲೋಕವನ್ನೇ ಸೃಷ್ಟಿಸಿದೆ. ಈ ಜಲಧಾರೆಯ ಸೊಬಗನ್ನು ಸವಿಯೋಕೆ ಪ್ರವಾಸಿಗರ ದಂಡೀಗ ಕಾಫಿನಾಡಲ್ಲಿ ಮನೆ ಮಾಡಿದೆ.
ಹೌದು. ಎಲ್ಲಿ ನೋಡಿದರೂ ಹಚ್ಚ ಹಸರಿನ ಸೊಬಗು. ತಂಪಾದ ವಾತಾವರಣ. ಇದು ಕಾಫಿನಾಡಲ್ಲಿ ಕಂಡು ಬರುವ ಸುಂದರ ದೃಶ್ಯಗಳು. ಈ ಸೌಂದರ್ಯವನ್ನ ಸವಿಯಲೆಂದೇ ಪ್ರವಾಸಿಗರು ಕಾಫಿನಾಡನ್ನ ಭೂಲೋಕದ ಸ್ವರ್ಗ ಅಂತಾರೆ. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟರೆ ಸಾಕು ಮನಸ್ಸು ಪ್ರಪುಲ್ಲಗೊಳ್ಳುತ್ತೆ. ಅದರಲ್ಲೂ ಇಲ್ಲಿನ ಜಲಪಾತಗಳಲ್ಲಿ ಎಂಜಾಯ್ ಮಾಡಿದರೆ ಪ್ರವಾಸಿಗರು ಕಾಫಿನಾಡ ಸೌಂದರ್ಯಕ್ಕೆ ಮತ್ತಷ್ಟು ಮಾರು ಹೋಗ್ತಾರೆ. ಅದರಲ್ಲೂ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಈ ಜಲಪಾತ ಹೊರ ಪ್ರಪಂಚಕ್ಕೆ ಅಷ್ಟಾಗಿ ಗೊತ್ತಿಲ್ಲ. ಆದರೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರೋ ಈ ಅಬ್ಬುಗುಡಿಗೆ ಜಲಪಾತ ಕಳಸಾದಿಂದ ಕೇವಲ 5 ಕಿ.ಮೀ ದೂರವಷ್ಟೆ. ಹಚ್ಚ ಹಸಿರಿನ ಕಾನನದ ಮಧ್ಯೆ ಹಾಲ್ನೋರೆಯಂತೆ ಭಾಸವಾಗುತ್ತಾ ಧುಮ್ಮಿಕ್ಕುವ ಈ ಜಲಪಾತದ ಸೌಂದರ್ಯವನ್ನು ವರ್ಣಿಸಲಾಧ್ಯ. ಅದರಲ್ಲೂ ಮಳೆಗಾಲದಲ್ಲಿ ಈ ಜಲಪಾತವನ್ನ ನೋಡುವುದೇ ಕಣ್ಣಿಗೆ ಹಬ್ಬ. ಮಳೆಗಾಲದಲ್ಲಿ ಈ ಜಲಪಾತದ ಸೊಬಗನ್ನ ಕಂಡವರು ಕಾಫಿನಾಡಿನ ಬಗ್ಗೆ ಮತ್ತಷ್ಟು ಫಿದಾ ಆಗೋದ್ರಲ್ಲಿ ನೋ ಡೌಟ್.