ಬೆಂಗಳೂರು, ಡಿಸೆಂಬರ್ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಾಕಿ ತೆರಿಗೆ ಸಂಗ್ರಹಕ್ಕೆ ಒನ್ ಟೈಂ ಸೆಟಲ್ಮೆಂಟ್ ಅವಧಿ ವಿಸ್ತರಣೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ.
ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ಕೆ ಪಾಟೀಲ್(HK Patil), 2024ರ ಜೂನ್ 30ರವರೆಗೆ ಒನ್ ಟೈಂ ಸೆಟಲ್ಮೆಂಟ್ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನೀರಿನ ಕರ ದರ ಇನ್ನು ಮುಂದೆ ವಾರ್ಷಿಕ ಹಣದುಬ್ಬರ ಸೂಚ್ಯಂಕಕ್ಕೆ ಸಂವಾದಿಯಾಗಿ ಹೆಚ್ಚಳ ಮಾಡುವ ಷರತ್ತಿನೊಂದಿಗೆ ನೀರಿನ ಕರ ವಿಧಿಸುವಿಕೆ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಪ್ರತಿ ಎಂಸಿಎಫ್ಟಿ ನೀರಿಗೆ ಮೂರು ಲಕ್ಷ ರೂಪಾಯಿ ರಾಜಧನ ನಿಗದಿ ಮಾಡಲಾಗಿದೆ. ಈ ಹಿಂದೆ ಎಂಸಿಎಫ್ಟಿಗೆ ಒಂದು ಲಕ್ಷ ರೂ. ಗೂ ಕಡಿಮೆ ರಾಜಧನ ನಿಗದಿಯಾಗಿತ್ತು.
ಕಾಲುವೆ, ಕೆರೆ, ಜಲಾಶಯಗಳಿಂದ ಒದಗಿಸುವ ನೀರಿಗೆ ಪ್ರತಿ ಎಂಸಿಎಫ್ಟಿ ಗೆ 3 ಲಕ್ಷ ರೂ. ರಾಜಧನ, ನೈಸರ್ಗಿಕ ಜಲಮಾರ್ಗ, ನದಿ, ಹಳ್ಳಗಳಿಂದ ಪ್ರತಿ ಎಸಿಎಫ್ಟಿ ಗೆ 1.50 ಲಕ್ಷ ರೂ. ರಾಜಧನ ನಿಗದಿಗೊಳಿಸಲಾಗಿದೆ.
ಎಡಿಬಿ ಯೋಜನೆಯಡಿ ಮಂಗಳೂರು ನಗರದಲ್ಲಿ 24/7 ನೀರು ಸರಬರಾಜು ಕಾಮಗಾರಿಯಲ್ಲಿ ಹೊಸದಾಗಿ 125 ಎಂಎಲ್ಡಿ ನೀರು ಶುದ್ದೀಕರಣ ಘಟಕ 127.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.