ಹುಬ್ಬಳ್ಳಿ: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್-1 ಪತ್ತೆಯಾಗಿದ್ದು, ರಾಜ್ಯದಲ್ಲಿಯೂ ಆತಂಕ ಆರಂಭವಾಗಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಕರ್ನಾಟಕದಲ್ಲಿ ಹೈಲರ್ಟ್ ಘೋಷಣೆ ಮಾಡಿದೆ.
ಜತೆಗೆ, 60 ವರ್ಷ ಮೇಲ್ಪಟ್ಟವರು, ಹೃದಯ ಸಂಬಂಧಿ ಸಮಸ್ಯೆ ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೊರೊನಾ ಲಕ್ಷಣ ಇರುವವರಿಗೂ ಮಾಸ್ಕ್ ಕಡ್ಡಾಯ ಮಾಡಲಾಗಿದೆ ಎಂದು ಕಿಮ್ಸ್ ಆಸ್ಪತ್ರೆಯ ಪ್ರಭಾರ ನಿರ್ದೇಶಕ ಡಾ. ಎಸ್.ಎಸ್.ಕಮ್ಮಾರ ಹೇಳಿದ್ದಾರೆ.
ಈಗಾಗಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದಲ್ಲಿ ಕೊರೊನಾ ರೂಪಾಂತರಿ ತಳಿ ಬಗ್ಗೆ ಆತಂಕ ಇದೆ. ಆದರೆ, ನಾವು ರಾಜ್ಯದ ಎಲ್ಲಾ ಆಸ್ಪತ್ರೆ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಮಾಹಿತಿ ರವಾನೆ ಮಾಡಿದ್ದೇವೆ. ಈಗಾಗಲೇ ಯಾವ ಕ್ರಮ ತೆಗೆದುಕೊಳ್ಳಬೇಕು ಅಂತ ಸಭೆ ಮಾಡಿ ಚರ್ಚಿಸಿದ್ದೇವೆ. ಕೇಂದ್ರ ಸರ್ಕಾರ ಹಾಗೂ ತಜ್ಞರ ಜತೆ ಕೂಡ ಚರ್ಚೆ ಮಾಡಲಾಗಿದೆ. ಮಾರ್ಗಸೂಚಿ ಕೈ ಸೇರಿದ ತಕ್ಷಣ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. ಕೋವಿಡ್ ಸಂದರ್ಭದಲ್ಲಿ ಇದ್ದಂತಹ ತಯಾರಿ ಈಗಾಗಲೇ ಕಿಮ್ಸ್ನಲ್ಲಿ ಇದೆ. ಬೆಡ್ ಹಾಗೂ ತಜ್ಞ ವೈದ್ಯರ ತಂಡ ಕೂಡ ಸಿದ್ಧವಿದ್ದು, ಎಲ್ಲ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸರ್ಕಾರದ ಮಾರ್ಗಸೂಚಿ ಬಂದ ತಕ್ಷಣ ಸಾರ್ವಜನಿಕರಿಗೂ ಜಾಗೃತಿ ಮೂಡಿಸಲಾಗುವುದು. ಸರ್ಕಾರದಿಂದ ಕಠಿಣ ಮಾರ್ಗ ಸೂಚಿಗಳು ಜಾರಿಗೆ ಬರಲಿದೆ. ಅದನ್ನು ಸಾರ್ವಜನಿಕರು ಪಾಲಿಸಿದರೆ ಉತ್ತಮ ಎಂದು ಕಿಮ್ಸ್ ಪ್ರಭಾರ ನಿರ್ದೇಶಕ ಡಾ. ಎಸ್.ಎಸ್. ಕಮ್ಮಾರ ಮಾಹಿತಿ ನೀಡಿದರು.