ಬೆಳಗಾವಿ: ವಿಧಾನಸಭೆಯಲ್ಲಿ ಮಂಗಳವಾರ ಬಳ್ಳಾರಿ ರಾಜಕೀಯ ಗುದ್ದಾಟ ಜೋರಾಗಿತ್ತು. ಸದನ ಜನಾರ್ದನ ರೆಡ್ಡಿ ಹಾಗೂ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ಶಾಸಕರ ವಾಕ್ಸಮರಕ್ಕೆ ಸಾಕ್ಷಿಯಾಯಿತು.
ಉತ್ತರ ಕರ್ನಾಟಕ ಚರ್ಚೆಯ ವೇಳೆ ಮಾತನಾಡುವಾಗ ಕಾಂಗ್ರೆಸ್ ಶಾಸಕ ನಾ ರಾ ಭರತ್ರೆಡ್ಡಿ, ಬ್ರಾಹ್ಮಿಣಿ ಸ್ಟೀಲ್ಸ್ ಸಂಸ್ಥೆ, ಬಳ್ಳಾರಿ ಜಿಲ್ಲೆಯಲ್ಲಿ 10 ಸಾವಿರ ಎಕರೆ ಜಮೀನನ್ನು ಬಲವಂತವಾಗಿ ರೈತರಿಂದ ವಶಪಡಿಸಿಕೊಂಡಿತ್ತು. ರೈತರ ಮೇಲೆ ಗೂಂಡಾಗಿರಿ ಮಾಡಿ ಭೂಮಿಯನ್ನ ಕಿತ್ತುಕೊಂಡಿದ್ದ ವ್ಯಕ್ತಿಗಳು ಈಗ ನಮ್ಮಿಂದಲೇ ಬಳ್ಳಾರಿ ಅಭಿವೃದ್ಧಿಯಾಗಿದೆ ಎನ್ನುತ್ತಿದ್ದಾರೆ. ವಿಮಾನ ನಿಲ್ದಾಣ ಆರಂಭಿಸುವುದಾಗಿ ಹೇಳಿ, ಗೋಲಿಬಾರ್ ನಡೆಸಿದ್ದರು. ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಇಲ್ಲಿಯವರೆಗೆ ವಿಮಾನ ನಿಲ್ದಾಣ ಮಾಡಿಲ್ಲ ಎಂದು ಜನಾರ್ದನ ರೆಡ್ಡಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಜನಾರ್ದನ ರೆಡ್ಡಿ ಅವರು, ಬ್ರಾಹ್ಮಿಣಿ ಸ್ಟೀಲ್ಸ್ ಕೈಗಾರಿಕೆ ಹೆಸರಲ್ಲಿ ಪಡೆದಿರುವ ಭೂಮಿಯಲ್ಲಿ ಕೆಲಸವಾಗಿಲ್ಲ ಎನ್ನುವುದಾದರೆ ಸರ್ಕಾರ ಭೂಮಿಯನ್ನು ಹಿಂಪಡೆಯಲಿ. ಅದನ್ನು ಬಿಟ್ಟು ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಅಕ್ಷೇಪ ವ್ಯಕ್ತಪಡಿಸಿದರು.