ಬೆಂಗಳೂರು / ಬೆಳಗಾವಿ:ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಯನ್ನು ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ನಿನ್ನೆಯಿಂದ ನಡೆಸುತ್ತಿದ್ದ ಧರಣಿ ಹಿಂಪಡೆದರು.
ವಿಧಾನಸಭೆಯ ಕಲಾಪದ ಆರಂಭದಲ್ಲೇ ಪ್ರತಿಪಕ್ಷಗಳ ಶಾಸಕರು ಧರಣಿಯನ್ನು ಮುಂದುವರೆಸಿದರು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತನಾಡಿ, ಇಡೀ ದೇಶವೇ ನಮ್ಮನ್ನು ನೋಡುತ್ತಿದೆ. ಇಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು. ನಿನ್ನೆಯಿಂದಲೂ ಧರಣಿ ನಡೆಸುತ್ತಿದ್ದೀರಿ. ಇದರಿಂದಾಗಿ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ ಗಮನ ಸೆಳೆಯುವ ಸೂಚನೆ. ಶಾಸನ ರಚನೆ ಸೇರಿದಂತೆ ಮಹತ್ವದ ಕಲಾಪಗಳಲ್ಲಿ ಪ್ರತಿಪಕ್ಷಗಳ ಶಾಸಕರು ಭಾಗವಹಿಸಿರಲಿಲ್ಲ ಎಂದು ವಿಷಾದಿಸಿದರು.
ಬರದ ಮೇಲೆ ಚರ್ಚೆಯಾಗಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆಗಳು ನಡೆಯಬೇಕಿದೆ. ಅದರಲ್ಲಿ ಅವರು ಭಾಗವಹಿಸಬೇಕು. ರಾಜ್ಯದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಿದೆ. ಈ ನಿಟ್ಟಿನಲ್ಲಿ ಧರಣಿ ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಪ್ರತಿಪಕ್ಷ ನಾಯಕ ಆರ್ ಅಶೋಕ ಮಾತನಾಡಲು ಎದ್ದು ನಿಂತಾಗ, ಸ್ಪೀಕರ್ ಅವರು ಮಧ್ಯಪ್ರವೇಶಿಸಲು ಯತ್ನಿಸಿದರು. ನಮಗೂ ಮಾತನಾಡಲು ಅವಕಾಶ ನೀಡಬೇಕು. ಸ್ಪೀಕರ್ ಆಡಳಿತ ಪಕ್ಷದ ಕಡೆಗಷ್ಟೇ ನೋಡಬಾರದು, ನಮ್ಮನ್ನೂ ಗಮನಿಸಬೇಕು. ಗೃಹ ಸಚಿವರು ಮಾತನಾಡಲು ಅವಕಾಶ ಕೊಟ್ಟಿದ್ದೀರ. ನಾನು ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆ ಮಧ್ಯಪ್ರವೇಶ ಮಾಡುವುದು ಬೇಡ ಎಂದು ಅಶೋಕ್ ಹೇಳಿದರು.