ನವದೆಹಲಿ : ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಿದೆ.
ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದರು. ಬಳಿಕ ಚುನಾವಣಾ ಫಲಿತಾಂಶ ಮತ್ತು ಇದಕ್ಕಾಗಿ ಶ್ರಮಿಸಿದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ವಿಧಾನಸಭೆ ಚುನಾವಣೆಯ ಗೆಲುವು ಐತಿಹಾಸಿಕ ಮತ್ತು ಅಭೂತಪೂರ್ವ ಗೆಲುವು. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಭಾವನೆ ಇಂದು ಗೆದ್ದಿದೆ. ಈ ಗೆಲುವು ಸ್ವಾವಲಂಬಿ ಭಾರತದ ಗೆಲುವು, ಆತ್ಮನಿರ್ಭರ ಭಾರತದ ಗೆಲುವು, ಪಾರದರ್ಶಕತೆ, ಉತ್ತಮ ಆಡಳಿತದ ಗೆಲುವಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಬಿಜೆಪಿಯ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಕ್ಕಾಗಿ ಧನ್ಯವಾದಗಳು. ಜೊತೆಗೆ ತೆಲಂಗಾಣದಲ್ಲೂ ಬಿಜೆಪಿಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಕೆಲವರು ಜಾತಿ ಆಧಾರದ ಮೇಲೆ ದೇಶವನ್ನು ವಿಭಜಿಸಲು ಮುಂದಾಗಿದ್ದರು. ನನ್ನ ಪ್ರಕಾರ ಮಹಿಳೆ, ಯುವಜನ, ರೈತರು ಮತ್ತು ಬಡವರು ಎಂಬ ನಾಲ್ಕು ಜಾತಿಗಳಿವೆ. ಇವರ ಸಬಲೀಕರಣವು ದೇಶವನ್ನು ಬಲಪಡಿಸುತ್ತದೆ. ಈ ನಾಲ್ಕು ಜಾತಿಯ ಜನರು ಬಿಜೆಪಿಗೆ ಮತ ಹಾಕಿದ್ದಾರೆ. ಪ್ರತಿಯೊಬ್ಬ ಬಡವನಿಗೂ ತಾನು ಗೆದ್ದಿದ್ದೇನೆ ಎಂಬ ಭಾವನೆ ಇದೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣವು ಬಿಜೆಪಿಯ ಮಾದರಿ ಅಭಿವೃದ್ಧಿಯಲ್ಲಿ ಪ್ರಮುಖ ಆಧಾರಸ್ಥಂಬವಾಗಿದೆ. ತಮ್ಮ ಭದ್ರತೆ, ಸುರಕ್ಷತೆ ಬಗ್ಗೆ ಬಿಜೆಪಿ ಮಾತ್ರ ಭರವಸೆ ನೀಡುತ್ತದೆ ಎಂದು ಮಹಿಳೆಯರು ನಂಬಿದ್ದಾರೆ. ಮಹಿಳಾ ಮತದಾರರರು ಬಿಜೆಪಿಗೆ ಭರಪೂರ ಆಶೀರ್ವಾದ ಮಾಡಿದ್ದಾರೆ. ಮಹಿಳೆಯರಿಗೆ ನೀಡಿರುವ ಎಲ್ಲಾ ಆಶ್ವಾಸನೆಗಳನ್ನು ಪೂರೈಸುವ ಭರವಸೆಯನ್ನು ನೀಡುತ್ತೇನೆ ಎಂದರು.