Breaking News
Home / ರಾಜಕೀಯ / ತವರಿನಲ್ಲಿ ವಿಶ್ವಕಪ್​ ಕೈಚೆಲ್ಲಿದ ಭಾರತ: 6ನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದ ಆಸೀಸ್​

ತವರಿನಲ್ಲಿ ವಿಶ್ವಕಪ್​ ಕೈಚೆಲ್ಲಿದ ಭಾರತ: 6ನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದ ಆಸೀಸ್​

Spread the love

ಅಹಮದಾಬಾದ್​ (ಗುಜರಾತ್​): ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ಏಕದಿನ ವಿಶ್ವಕಪ್​ ಗೆದ್ದುಕೊಂಡಿದೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಫೈನಲ್​ನಲ್ಲಿ ಭಾರತ ನೀಡಿದ್ದ 241 ರನ್​ಗಳ ಸಾಧಾರಣ ಗುರಿಯನ್ನು ಆಸೀಸ್​ 7 ಓವರ್​ ಉಳಿಸಿಕೊಂಡು 6 ವಿಕೆಟ್​ನಿಂದ ಗೆದ್ದಿದೆ. 2003ರಲ್ಲಿ ಕಾಂಗರೂ ಪಡೆ​ ವಿರುದ್ಧ ಸೋಲು ಕಂಡಿದ್ದ ಭಾರತ, ಇದೀಗ 20 ವರ್ಷದ ನಂತರವೂ ವಿಶ್ವಕಪ್ ಫೈನಲ್​ನಲ್ಲಿ ಸೋಲು ಕಂಡಿದೆ.

2003ರ ವಿಶ್ವಕಪ್​​ನಲ್ಲಿ ರಿಕಿ ಪಾಂಟಿಂಗ್​ 140 ರನ್​ ಗಳಿಸಿ ಭಾರತದ ಸೋಲಿಗೆ ಕಾರಣರಾದರೆ, 2023ರ ವಿಶ್ವಕಪ್​ನಲ್ಲಿ ಟ್ರಾವಿಸ್ ಹೆಡ್ ಭಾರತಕ್ಕೆ ಮುಳುವಾದರು. ಚೊಚ್ಚಲ ವಿಶ್ವಕಪ್​ ಫೈನಲ್​ಗೆ ಪ್ರವೇಶಿಸಿ ವೆಸ್ಟ್​ ಇಂಡೀಸ್​ ವಿರುದ್ಧ ಸೋಲು ಕಂಡಿದ್ದ ಆಸ್ಟ್ರೇಲಿಯಾ ಮತ್ತೆಂದೂ ಫೈನಲ್​ ಹಂತಕ್ಕೆ ಬಂದು ಎಡವಿಲ್ಲ. 1975ರ ನಂತರ 6 ಬಾರಿ ಫೈನಲ್​ ಪ್ರವೇಶಿಸಿರುವ ಕಾಂಗರೂ ಪಡೆ ಪ್ರತಿ ಬಾರಿಯೂ ಚಾಂಪಿಯನ್​ ಆಗಿದೆ.

 

 

ವಿಶ್ವಕಪ್​ನ ಲೀಗ್​ ಮತ್ತು ಸೆಮೀಸ್​ ಸೇರಿ 10 ಪಂದ್ಯಗಳನ್ನು ಗೆದ್ದು ಫೈನಲ್​ ಪ್ರವೇಶಿಸಿದ್ದ ಭಾರತ ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ತಂಡ ವಿರಾಟ್​ ಕೊಹ್ಲಿ (54), ಕೆ ಎಲ್​ ರಾಹುಲ್​ (66) ಅರ್ಧಶತಕ ಮತ್ತು ನಾಯಕ ರೋಹಿತ್​ ಶರ್ಮಾ ಅವರ 47 ರನ್​ಗಳ ಕೊಡುಗೆಯಿಂದ 50 ಓವರ್​ ಅಂತ್ಯಕ್ಕೆ ಎಲ್ಲಾ ವಿಕೆಟ್​ ಕಳೆದುಕೊಂಡು 240 ರನ್​ ಕಲೆಹಾಕಿತ್ತು.

241 ರನ್​ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಕ್ಕೆ ಆರಂಭದಲ್ಲಿ ಭಾರತದ ಬೌಲರ್​ಗಳು ಬಿಗಿ ದಾಳಿ ಮೂಲಕ ಕಾಡಿದರು. ಇದರಿಂದ ಮೂರು ವಿಕೆಟ್ ಆಸ್ಟ್ರೇಲಿಯಾ ಕಳೆದುಕೊಂಡಿತ್ತು. ಆದರೆ, ನಂತರ ನಾಲ್ಕನೇ ವಿಕೆಟ್​ಗೆ ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ 192 ರನ್​ ಪಾಲುದಾರಿಕೆ ಮೂಲಕ ಭಾರತ ತಂಡದಿಂದ ಗೆಲುವನ್ನು ಕಸಿದುಕೊಂಡರಲ್ಲದೆ, ಆಸೀಸ್​ ಚಾಂಪಿಯನ್​ ಪಟ್ಟ ಅಲಂಕರಿಸುವಂತೆ ಮಾಡಿದರು.

ಆಸೀಸ್​ಗೆ ಆರಂಭಿಕ ಆಘಾತ: ಎರಡನೇ ಓವರ್​ನಲ್ಲಿ ಮೊಹಮ್ಮದ್​ ಶಮಿ ಡೇವಿಡ್​ ವಾರ್ನರ್​ (7) ವಿಕೆಟ್​ ಪಡೆದರು. ಅವರ ಬೆನ್ನಲ್ಲೇ ಮಿಚೆಲ್ ಮಾರ್ಷ್ (15) ಮತ್ತು ಸ್ಟೀವನ್ ಸ್ಮಿತ್ (4) ವಿಕೆಟ್​ ಉರುಳಿತು. ಶಮಿ 1 ವಿಕೆಟ್​ ಪಡೆದರೆ, ಬುಮ್ರಾ 2 ವಿಕೆಟ್​ ಕಬಳಿಸಿದರು. ಆದರೆ ನಂತರ ಭಾರತದ ಯಾವುದೇ ಬೌಲರ್ ಕೂಡ​ ವಿಕೆಟ್​ ಪಡೆಯಲಿಲ್ಲ.

ಹೆಡ್, ಲಬುಶೇನ್ ಜೊತೆಯಾಟ: 47ಕ್ಕೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾಕ್ಕೆ 192 ರನ್​ಗಳ ಪಾಲುದಾರಿಕೆಯನ್ನು ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಬುಶೇನ್ ಮಾಡಿದರು. ಈ ಜೊತೆಯಾಟ ಮುರಿಯುವಲ್ಲಿ ಟೀಮ್​ ಇಂಡಿಯಾದ ಬೌಲರ್​ಗಳು ವಿಫಲರಾದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ