ಬೆಂಗಳೂರು: ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಕೆಂಗಲ್ ಗೇಟ್ ಮೂಲಕ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಹೆಗಲಿಗೆ ಕೈ ಹಾಕುತ್ತಾ ಬಂದು ಗಮನ ಸೆಳೆದರು.
ಇತ್ತೀಚೆಗೆ ಕೆ.ಎನ್.ರಾಜಣ್ಣ ಲೋಕಸಭೆ ಚುನಾವಣೆಯ ದೃಷ್ಟಿಯಿಂದ ರಾಜ್ಯದಲ್ಲಿ ಮೂರು ಡಿಸಿಎಂ ಆಗಬೇಕು ಎಂದು ಹೈಕಮಾಂಡ್ ನಾಯಕರನ್ನು ಒತ್ತಾಯಿಸಿದ್ದರು. ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕೆಂಬ ಅಪೇಕ್ಷೆ ಇದೆ ಎಂದಿದ್ದರು. ಸಿಎಂ ಸ್ಥಾನಕ್ಕೆ ಡಾ.ಜಿ.ಪರಮೇಶ್ವರ್ ಪರ ಬೆಂಬಲ ಇದೆ ಎಂಬ ಹೇಳಿಕೆಗಳನ್ನೂ ನೀಡಿ ಡಿ.ಕೆ.ಶಿವಕುಮಾರ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಇನ್ನೊಂದೆಡೆ, ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ರಾಜಕೀಯದಲ್ಲಿ ಡಿಕೆಶಿ ಹಸ್ತಕ್ಷೇಪದ ಸಿಟ್ಟು ಬಂದಿತ್ತು. ವರ್ಗಾವಣೆ ವಿಚಾರದಲ್ಲೂ ಡಿಕೆಶಿ ವಿರುದ್ಧ ಮುನಿಸಿಕೊಂಡಿದ್ದರು ಇದೇ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗ ಶಾಸಕರೊಂದಿಗೆ ವಿದೇಶ ಪ್ರವಾಸ ಕೈಗೊಳ್ಳಲು ಮುಂದಾಗಿದ್ದರು. ಡಿ.ಕೆ.ಶಿವಕುಮಾರ್ ಮೊನ್ನೆಯಷ್ಟೇ ಸತೀಶ್ ಜಾರಕಿಹೊಳಿ ಸರ್ಕಾರಿ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಈ ಮೂಲಕ ಭಿನ್ನಮತ ಶಮನಕ್ಕೆ ಯತ್ನಿಸಿದ್ದರು.
ನಿನ್ನೆ ಸಂಪುಟ ಸಭೆಗೆ ತೆರಳುವಾಗ ವಿಧಾನಸೌಧದ ಕೆಂಗಲ್ ಗೇಟ್ ಬಳಿ ಮೂವರು ಮುಖಾಮುಖಿಯಾದರು. ಈ ಸಂದರ್ಭದಲ್ಲಿ ಡಿಕೆಶಿ ಮಧ್ಯದಲ್ಲಿ ನಿಂತು ಕೆ.ಎನ್.ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಹೆಗಲಿಗೆ ಕೈ ಹಾಕಿ ನಗುತ್ತಲೇ ಮಾತನಾಡುತ್ತಾ ವಿಧಾನಸೌಧದೊಳಗೆ ಹೆಜ್ಜೆ ಹಾಕಿದರು. ಇದರೊಂದಿಗೆ ಡಿ.ಕೆ.ಶಿವಕುಮಾರ್ ಡ್ಯಾಮೇಜ್ ಕಂಟ್ರೋಲ್ ಮೊರೆ ಹೋದರು. ನಾವೆಲ್ಲರೂ ಒಂದಾಗಿದ್ದು, ಒಗ್ಗಟ್ಟಾಗಿದ್ದೇವೆಂಬ ಸಂದೇಶ ರವಾನಿಸಲು ಯತ್ನಿಸಿದರು.