ನವದೆಹಲಿ,ನ.7-ಭಾರತದ ಸಶಸ್ತ್ರ ಪಡೆಗಳಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಏಕಶ್ರೇಣಿ, ಏಕಪಿಂಚಣಿ(ಒಆರ್ ಒಪಿ) ಐತಿಹಾಸಿಕ ನಿರ್ಧಾರ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕೇಂದ್ರ ಸರ್ಕಾರದ ಈ ಯೋಜನೆಯಿಂದ ನಮ್ಮ ಸೇನಾಪಡೆಗಳು ಮತ್ತು ಯೋಧರಲ್ಲಿ ನೈತಿಕ ಸ್ಥೈರ್ಯ ಮೂಡಿಸಿದ್ದು, ಅವರ ಸೌಖ್ಯತೆಗಾಗಿ ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.
ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಒಆರ್ ಒಪಿ ಜಾರಿಗೆ ತಂದು ಇಂದಿಗೆ 5 ವರ್ಷಗಳು ಪೂರೈಸಿದ ಸಂದರ್ಭದಲ್ಲಿ ಪ್ರಧಾನಿಯವರು ಟ್ವೀಟ್ ಮಾಡಿ, ಸೇನಾಪಡೆ ಮತ್ತು ಯೋಧರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಏಕಶ್ರೇಣಿ-ಏಕಪಿಂಚಣಿಯಿಂದ ಶಿಸ್ತುಬದ್ಧ ಸಶಸ್ತ್ರ ಪಡೆಗಳಲ್ಲಿ ಮತ್ತಷ್ಟು ಏಕರೂಪತೆಗೆ ಕಾರಣವಾಗಿದೆ. ಇದರಿಂದ ತಾರತಮ್ಯ ಸಂಪೂರ್ಣ ನಿರ್ಮಾಣವಾಗಿ ಸಮಾನತೆಗೆ ಕಾರಣವಾಗಿದ್ದು, ನಮ್ಮ ಯೋಧರ ಸೌಖ್ಯತೆಯನ್ನು ಹೆಚ್ಚಿಸಿದೆ ಎಂದರು.ಯೋಧರ ನೈತಿಕತೆ ಮತ್ತು ಧೈರ್ಯವನ್ನು ಮತ್ತಷ್ಟು ಹೆಚ್ಚಿಸಲು ಈ ಮಹತ್ವಾಕಾಂಕ್ಷೆ ಯೋಜನೆಯಿಂದ ಸಾಧ್ಯವಾಗಿದೆ. ಇದು ಕೇಂದ್ರ ಸರ್ಕಾರದ ಐತಿಹಾಸಿಕ ದಿಟ್ಟ ಕ್ರಮವಾಗಿದೆ ಎಂದು ಮೋದಿ ಹೇಳಿದರು.