Breaking News
Home / Uncategorized / ರಾಜ್ಯ ಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ:

ರಾಜ್ಯ ಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವಕ್ಕೆ ಅದ್ಧೂರಿ ಚಾಲನೆ:

Spread the love

ಬೆಳಗಾವಿ: ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಚನ್ನಮ್ಮನ ರಾಜ್ಯ ಮಟ್ಟದ ಕಿತ್ತೂರು ಉತ್ಸವ-2023ರ ಭವ್ಯ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸೋಮವಾರ ಬೆಳಿಗ್ಗೆ ಚಾಲನೆ ನೀಡಿದರು.

ರಾಜ್ಯದ ವಿವಿಧೆಡೆ ಸಂಚರಿಸಿ ಬೈಲಹೊಂಗಲದಲ್ಲಿ ಇರುವ ಚನ್ನಮ್ಮನ ಸಮಾಧಿ ಸ್ಥಳದಿಂದ ಆಗಮಿಸಿ ಬಂದ ವಿಜಯಜ್ಯೋತಿಯನ್ನು ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ವಿಜಯಜ್ಯೋತಿಯನ್ನು ಸ್ವಾಗತಿಸಿ, ಸಂಸ್ಥಾನದ ಧ್ವಜಾರೋಹಣವನ್ನು ಸತೀಶ್ ಜಾರಕಿಹೊಳಿ ನೆರವೇರಿಸಿದರು. ನಂತರ ಚನ್ನಮ್ಮ ಪುತ್ಥಳಿಗೆ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಸಂಸದೆ ಮಂಗಲ ಅಂಗಡಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ಮಹಾಂತೇಶ ಕೌಜಲಗಿ, ಆಸೀಫ್ ಸೇಠ್ ಸೇರಿ ಮತ್ತಿತರ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.

ಕಿತ್ತೂರು ರಾಜಗುರು ಸಂಸ್ಥಾನದ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚನ್ನಮ್ಮ, ರಾಯಣ್ಣನಿಗೆ ಜೈಕಾರ ಹಾಕುವಾಗ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿ.ಪಂ.ಸಿಇಒ ಹರ್ಷಲ್ ಭೊಯರ್ ಸೇರಿ ಮತ್ತಿತರ ಅಧಿಕಾರಿಗಳು ಇದ್ದರು.

ಇದೇ ವೇಳೆ ಜಾನಪದ ಕಲಾವಾಹಿನಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು. ಚನ್ನಮ್ಮನ ಕಿತ್ತೂರಿನ ಮಹಾದ್ವಾರದ ಎರಡೂ ಬದಿಯಲ್ಲಿ ಇರುವ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಕಂಚಿನ ಪುತ್ಥಳಿಗಳಿಗೂ ಗಣ್ಯರು ಮಾಲಾರ್ಪಣೆ ಮಾಡಿದರು. ಫಲ-ಪುಷ್ಪ ಪ್ರದರ್ಶನಕ್ಕೆ ಸಂಸದೆ ಮಂಗಲ ಅಂಗಡಿ ಚಾಲನೆ ನೀಡಿದರೆ, ವಸ್ತು ಪ್ರದರ್ಶನವನ್ನು ಶಾಸಕ ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು.

ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, “ಸರ್ಕಾರ ಮೂರು ಕೋಟಿ ರೂ.ವರೆಗೆ ಅನುದಾನ ನೀಡಿದೆ. ಮೈಸೂರು ದಸರಾದಂತೆ ಅದ್ದೂರಿಯಾಗಿ ಉತ್ಸವ ಮಾಡ್ತೀವಿ” ಎಂದರು. ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಗೈರಾಗಿರುವ ವಿಚಾರಕ್ಕೆ, ಕೆಲಸದ ನಿಮಿತ್ತ ಬರದೇ ಇರಬಹುದು, ಮುಂದಿನ ಬಾರಿ ಖಂಡಿತಾ ಕರೆಸೋಣ. ಈ ಬಾರಿ ನಾವು, ಸಚಿವರು ಶಾಸಕರು ಸೇರಿದಂತೆ ಅಧಿಕಾರಿಗಳು ಸೇರಿ ಉತ್ಸವ ಮಾಡ್ತೀವಿ ಎಂದರು.

ಕಲಾ ತಂಡಗಳ ಮೆರುಗು: ಕೊಂಬು ಕಹಳೆ, ಚಂಡಿವಾದ್ಯ, ಕೇರಳ ಯಕ್ಷಗಾನ, ಮಹಿಳಾ ಡೊಳ್ಳುಕುಣಿತ, ಕಂಸಾಳೆ, ಚಿಟ್ಟೆಮೇಳ, ಗಾರುಡಿ ಗೊಂಬೆ, ನಗಾರಿ, ಪಟಾಕುಣಿತ, ಮಹಿಳಾ ನಗಾರಿ, ಮಹಿಳಾ ವೀರಗಾಸೆ, ಗೊಂಬೆ ಕುಣಿತ, ಕಂಸಾಳೆ, ಸೋಮನ ಕುಣಿತ, ಕೋಲಾಟ, ಕರಗ ನೃತ್ಯ, ಲಂಬಾಣಿ ನೃತ್ಯ, ತಮಟೆ ನೃತ್ಯ ಸೇರಿ ವಿವಿಧ ವೇಷಧಾರಿಗಳು ಮತ್ತಿತರ ಜಾನಪದ ಕಲಾತಂಡಗಳು ಮೆರವಣಿಯ ಮೆರುಗು ಹೆಚ್ಚಿಸಿದವು.

ವಿಶ್ವಗುರು ಬಸವೇಶ್ವರ, ಕಿತ್ತೂರು ಚನ್ನಮ್ಮ, ಸರದಾರ ಗುರುಶಿದ್ಧಪ್ಪ, ಸಂಗೊಳ್ಳಿ ರಾಯಣ್ಣ, ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರದ ಬಾವುಟಗಳು, ಕೃತಕ ಆನೆ, ಯಮಧರ್ಮ ವೇಷಧಾರಿ ನೃತ್ಯ ವಿಶೇಷವಾಗಿತ್ತು. ಸಾಂಪ್ರದಾಯಿಕ ವೇಷದಲ್ಲಿ ಆಗಮಿಸಿದ್ದ ಸಹಸ್ರಾರು ಜನ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ವಿವಿಧ ಇಲಾಖೆಗಳ ರೂಪಕ ವಾಹನಗಳು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸಿದವು‌.

ಚನ್ನಮ್ಮನ ವೃತ್ತದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೋಟೆ ಆವರಣ ತಲುಪಿತು. ಸುಡುಬಿಸಿಲನ್ನೂ ಲೆಕ್ಕಿಸದೇ ಜನರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಮಹಿಳೆಯರು ಕುಂಬ ಹೊತ್ತು ಸಾಗಿದರು‌. ಮೆರವಣಿಗೆಯಲ್ಲಿ ಭಾಗಿಯಾದ ಜನರಿಗೆ ಸ್ಥಳೀಯರು ಅಂಬಲಿ, ಶರಬತ್, ಮಜ್ಜಿಗೆ, ನೀರು ವಿತರಿಸಿ ದಣಿವಾರಿಸಿದರು. ಜಿಲ್ಲಾಡಳಿತದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.


Spread the love

About Laxminews 24x7

Check Also

3 ತಿಂಗಳಿಂದಲೇ ಅಂಜಲಿ ಹತ್ಯೆಗೆ ಪ್ಲಾನ್; ವಕೀಲರ ಬಳಿಯೂ ಮಾಹಿತಿ ಸಂಗ್ರಹ!

Spread the love ಹುಬ್ಬಳ್ಳಿ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಹುಬ್ಬಳ್ಳಿಯ ಅಂಜಲಿ ಹತ್ಯೆಯ ಆರೋಪಿಯನ್ನು ಗುರುವಾರ ತಡರಾತ್ರಿ ಬಂಧಿಸಲಾಗಿದೆ. ಕೊಲೆ ಆರೋಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ