Breaking News
Home / Uncategorized / ಬಿಜೆಪಿ ಶಾಸಕ ಅಭಯ್ ಪಾಟೀಲ ವಿರುದ್ಧ ಅವ್ಯವಹಾರ ಆರೋಪ: ತನಿಖೆ ಮಾಡಿಸುತ್ತೇವೆ ಎಂದ ಸಚಿವ ಸತೀಶ್ ಜಾರಕಿಹೊಳಿ

ಬಿಜೆಪಿ ಶಾಸಕ ಅಭಯ್ ಪಾಟೀಲ ವಿರುದ್ಧ ಅವ್ಯವಹಾರ ಆರೋಪ: ತನಿಖೆ ಮಾಡಿಸುತ್ತೇವೆ ಎಂದ ಸಚಿವ ಸತೀಶ್ ಜಾರಕಿಹೊಳಿ

Spread the love

ಬೆಳಗಾವಿ: ಇಲ್ಲಿನ ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ.ರಸ್ತೆಯವರೆಗೆ ಮಾಡಿರುವ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಿವಾಜಿ ಮಹಾರಾಜ ಉದ್ಯಾನದ ಬಳಿ ಬೆಳಗಾವಿ ನಾಗರಿಕರ ಹಿತರಕ್ಷಣಾ ಒಕ್ಕೂಟದಿಂದ ಇಂದು ಪ್ರತಿಭಟನೆ ನಡೆಸಲಾಯಿತು. ಸ್ಥಳೀಯ ಶಾಸಕ ಅಭಯ್ ಪಾಟೀಲ ಭಾವಚಿತ್ರ ಇರುವ ಫಲಕಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ಘೋಷಣೆ ಮೊಳಗಿಸಿದರು.

ಮಾನವ ಸರಪಳಿ ನಿರ್ಮಿಸಿ, ಬುಟ್ಟಿಯಲ್ಲಿ ಮರಳು, ಕಡಿ, ನಕಲಿ ನೋಟುಗಳನ್ನು ಪ್ರದರ್ಶಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಧರಣಿ ನಿರತರಿಂದ ಮನವಿ ಸ್ವೀಕರಿಸಿದರು‌.

 

ಬಿಜೆಪಿ ಶಾಸಕ ಅಭಯ್ ಪಾಟೀಲ ವಿರುದ್ಧ ಅವ್ಯವಹಾರ ಆರೋಪ: ತನಿಖೆ ಮಾಡಿಸುತ್ತೇವೆ ಎಂದ ಸಚಿವ ಸತೀಶ್ ಜಾರಕಿಹೊಳಿ

”ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೆ ಪಿ.ಬಿ.ರಸ್ತೆ ಅಗಲೀಕರಣವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಸ್ಥಳೀಯ ಶಾಸಕ ಅಭಯ ಪಾಟೀಲ ಮಾತು ಕೇಳಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಮಾಡಿಸಿದ್ದಾರೆ. ರಸ್ತೆ ಅಗಲೀಕರಣ ಕೂಡ ಸರಿಯಾಗಿಲ್ಲ. ಮನೆ ಕಳೆದುಕೊಂಡ ಜನ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ನ್ಯಾಯಾಲಯ ಸ್ಮಾರ್ಟ್ ಸಿಟಿಯಿಂದ ಸಂತ್ರಸ್ತರಿಗೆ ಪರಿಹಾರ ಕೊಡುವಂತೆ ಸೂಚನೆ ನೀಡಿದೆ. ನ್ಯಾಯಾಲಯದ ತೀರ್ಪು ಬಂದಮೇಲೂ ಅಕ್ರಮವಾಗಿ ಬುಡಾ ಆಯುಕ್ತರು ರಸ್ತೆ ಅಗಲೀಕರಣ ಮಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಕಾಮಗಾರಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಿದ ಅಧಿಕಾರಿಗಳಿಂದಲೇ ಈ ನಷ್ಟದ ಪರಿಹಾರವನ್ನು ಕೊಡಿಸಬೇಕು” ಎಂದು ಮನವಿಯಲ್ಲಿ ಪ್ರತಿಭಟನಾಕಾರರು ದೂರಿದರು.

ತಪ್ಪಿತಸ್ಥರ ವಿರುದ್ಧ ಕ್ರಮ- ಸತೀಶ್ ಜಾರಕಿಹೊಳಿ: ಮನವಿ ಸ್ವೀಕರಿಸಿ ಮಾತನಾಡಿದ ಸತೀಶ್ ಜಾರಕಿಹೊಳಿ, ”ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಮಾಡಿ, ಯಾರ ಮೂಲಕ ತನಿಖೆ ಮಾಡಿಸಬೇಕೆಂದು ನಿರ್ಧರಿಸುತ್ತೇವೆ. ಆ ಬಳಿಕ ತನಿಖಾ ವರದಿ ಆಧಾರದ ಮೇಲೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ನ್ಯಾಯಸಮ್ಮತವಾಗಿ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇವೆ. ಮೇಲ್ನೋಟಕ್ಕೆ ಕಾಮಗಾರಿಯಲ್ಲಿ ಅವ್ಯವಹಾರ ಆಗಿರುವುದು ಕಂಡುಬಂದಿದೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸುಳ್ಳು ಕೇಸ್ ಹಾಕಿರುವ ಕುರಿತು ಸಹ ತನಿಖೆ ಮಾಡಿಸುತ್ತೇವೆ” ಎಂದು ಭರವಸೆ ನೀಡಿದರು.

ಆಮ್ ಆದ್ಮಿ ಪಕ್ಷದ ಮುಖಂಡ ರಾಜಕುಮಾರ ಟೋಪಣ್ಣವರ ಮಾತನಾಡಿ, ”ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಇಲ್ಲಿನ ಶಾಸಕರು ಕೆಲ ಪೊಲೀಸ್ ಅಧಿಕಾರಿಗಳ ಮೂಲಕ ಭಯದ ವಾತಾವರಣ ನಿರ್ಮಿಸಿದ್ದಾರೆ. ಪ್ರಧಾನಿ ಮೋದಿಯವರು ನಾ ಖಾವುಂಗಾ, ನಾ ಖಾನೆೇ ದುಂಗಾ, ಮೈ ಚೌಕಿದಾರ್​​ ಎಂದು ಹೇಳುತ್ತಾರೆ. ಆದರೆ, ಇಲ್ಲಿನ ಶಾಸಕರು ತದ್ವಿರುದ್ಧ. ಅಲ್ಲದೇ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಎಲ್ಲಿ ಅಭಿವೃದ್ಧಿ ಮಾಡಬೇಕು ಅಲ್ಲಿ ಮಾಡಿಲ್ಲ‌. ತಮ್ಮ ವೈಯಕ್ತಿಕವಾಗಿ ಅಭಿವೃದ್ಧಿ ಮಾಡಿದ್ದಾರೆ. ರಸ್ತೆ ಅಗಲೀಕರಣ ನಿಯಮಾನುಸಾರ, ವೈಜ್ಞಾನಿಕವಾಗಿ ಆಗಿಲ್ಲ. ಪಿಎಂಸಿ ಟ್ರ್ಯಾಕ್ ಟೇಬಲ್ ಇಂಡಿಯಾ ಸಾಮಾಜಿಕ ಪ್ರಭಾವದ ಮೌಲ್ಯಮಾಪನ‌ ವರದಿಯನ್ನೂ ಸ್ಮಾರ್ಟ್ ಸಿಟಿ‌ ಅಧಿಕಾರಿಗಳು ನೀಡಿಲ್ಲ” ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸುಜೀತ ಮುಳಗುಂದ, ಎನ್.ಆರ್.ಲಾತೂರ್, ವಿನಯ ನಾವಲಗಟ್ಟಿ, ಪ್ರದೀಪ ಎಂ.ಜೆ, ಪ್ರಭಾವತಿ ಮಾಸ್ತಮರಡಿ, ಪರಶುರಾಮ ಡಗೆ, ರಾಜನ್ ಹುಲಬತೆ, ರಾಘವೇಂದ್ರ ಲೋಕರಿ, ರಮೇಶ ಸೋಂಟಕ್ಕಿ, ರಮಾಕಾಂತ ಕೊಂಡುಸ್ಕರ್, ಸರಳಾ ಸಾತ್ಪುತೆ, ಶುಭಂ ಸೆಳಕೆ, ದೀಪಕ ಜಮಖಂಡಿ ಸೇರಿದಂತೆ ಮತ್ತಿತರರು ಇದ್ದರು.


Spread the love

About Laxminews 24x7

Check Also

SSLC ಪರೀಕ್ಷೆ ಟಾಪರ್ ಸನ್ಮಾನಿಸಿ, ಬಹುಮಾನ ಪ್ರಕಟಿಸಿದ ಸಿಎಂ ಸಿದ್ದರಾಮಯ್ಯ!

Spread the love ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್‌ ಪಡೆದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ