ಉಳ್ಳಾಲ (ಮಂಗಳೂರು): ಶಾಲಾ ಪರೀಕ್ಷೆಯ ಗಣಿತ ವಿಷಯದಲ್ಲಿ ಒಂದು ಅಂಕ ಕಡಿಮೆ ನೀಡಿದರು ಎಂದು ಸಿಟ್ಟಾಗಿದ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತಮ್ಮ ಗಣಿತ ಶಿಕ್ಷಕಿಯ ನೀರಿನ ಬಾಟಲ್ಗೆ ಅವಧಿ ಮುಗಿದು ಹೋದ ಮಾತ್ರೆಯನ್ನು ಹಾಕಿದ್ದಾರೆ.
ಈ ಬಾಟಲ್ನಲ್ಲಿರುವ ನೀರು ಕುಡಿದಿದ್ದರಿಂದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡ ಘಟನೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಈ ಸಂಬಂಧ ಶಾಲೆಯಲ್ಲಿ ಎಸ್ಡಿಎಂಸಿಯಿಂದ ತುರ್ತು ಸಭೆ ನಡೆಸಿ, ವಿದ್ಯಾರ್ಥಿನಿಯರಿಬ್ಬರಿಗೆ ಟಿಸಿ ನೀಡಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿರುವ ವಿಚಾರ ತಿಳಿದು ಬಂದಿದೆ.
ಶಾಲಾ ಯುನಿಟ್ ಟೆಸ್ಟ್ನ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಅಲ್ಲದೇ ಸರಿಯಿದ್ದ ಉತ್ತರಕ್ಕೆ ಶಿಕ್ಷಕಿ ತಪ್ಪು ಹಾಕಿದ್ದಾರೆ ಅನ್ನುವುದಕ್ಕೆ ವಿದ್ಯಾರ್ಥಿನಿ ಕೋಪಗೊಂಡಿದ್ದಳು. ಇದದಿಂದ ತನ್ನ ಸ್ನೇಹಿತೆಯೊಬ್ಬಳ ಸಹಾಯ ಪಡೆದುಕೊಂಡ ಆರನೇ ತರಗತಿ ವಿದ್ಯಾರ್ಥಿನಿ, ಸ್ಟಾಫ್ ರೂಮ್ನಲ್ಲಿ ಶಿಕ್ಷಕಿಯರಿಲ್ಲದ ಸಂದರ್ಭ ನೋಡಿಕೊಂಡು ಎಲ್ಲಿಂದಲೋ ತಂದಿದ್ದ ಅವಧಿ ಮುಗಿದಿದ್ದ ಮಾತ್ರೆಗಳನ್ನು ಗಣಿತ ಶಿಕ್ಷಕಿಯ ವಾಟರ್ ಬಾಟಲಿಗೆ ಹಾಕಿದ್ದಾರೆ.
ಈ ಬಾಟಲಿಯಲ್ಲಿ ನೀರನ್ನು ಗಣಿತ ಶಿಕ್ಷಕಿ ಹಾಗೂ ಮತ್ತೋರ್ವ ಶಿಕ್ಷಕಿ ಕುಡಿದಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡಿದ್ದಾರೆ. ಇನ್ನೋರ್ವ ಶಿಕ್ಷಕಿಗೆ ಮುಖದಲ್ಲಿ ಊತ ಉಂಟಾಗಿದೆ. ನೀರಿನ ರುಚಿಯಲ್ಲಿ ಬದಲಾವಣೆ ಕಂಡು ಬಂದಿದ್ದರಿಂದ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಆಗ ನೀರಲ್ಲಿ ಮಾತ್ರೆಗಳಿರುವುದು ಕಂಡು ಬಂದಿದೆ. ಈ ಕುರಿತು ವಿಚಾರಿಸಿ ಸಿಸಿಟಿವಿ ಗಮನಿಸಿದಾಗ ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದೆ.