ಬೆಳಗಾವಿ: ”ನಮ್ಮ ಸರ್ಕಾರದ ಅವಧಿಯಲ್ಲಿ ಜಾತಿ ಗಣತಿ ವರದಿ ಪೂರ್ಣವಾಗಿರಲಿಲ್ಲ.
ಹಾಗಾಗಿ, ಬಿಡುಗಡೆಗೊಳಿಸಲು ಆಗಲಿಲ್ಲ. ಈಗ ವರದಿ ಕೇಳಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ”ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿ ವರದಿಯನ್ನು ಇನ್ನೂ ನಮಗೆ ನೀಡಿಲ್ಲ. ಜಾತಿ ಗಣತಿ ಹಾಗೂ ಸಾಮಾಜಿಕ, ಆರ್ಥಿಕ ಸರ್ವೆಗೆ ಕಾಂತರಾಜು ಅಧ್ಯಕ್ಷತೆಯಲ್ಲಿ ನಾನೇ ಆದೇಶ ನೀಡಿದ್ದೆ. ವರದಿ ಪೂರ್ಣಗೊಳ್ಳುವ ಮುನ್ನ ನಮ್ಮ ಸರ್ಕಾರದ ಅವಧಿ ಮುಗಿಯಿತು. ನಂತರ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಆ ವರದಿ ತೆಗೆದುಕೊಳ್ಳಲಿಲ್ಲ” ಎಂದು ತಿಳಿಸಿದರು.
”ಆಗಿನ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವಧಿ ಮುಗಿಯಿತು. ಬಿಜೆಪಿ ನೇಮಿಸಿದ ಜಯಪ್ರಕಾಶ ಹೆಗಡೆ ಈಗ ಅಧ್ಯಕ್ಷರಾಗಿದ್ದಾರೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ಅವರ ಕೆಲಸ. ಆದರೆ, ಅವರು ವರದಿ ನೀಡಿಲ್ಲ, ಕಾರ್ಯದರ್ಶಿನೂ ಸಹಿ ಮಾಡಿಲ್ವಂತೆ. ಅವರು ವರದಿ ಕೊಟ್ಟರೆ ನೋಡೋಣ. ನಾನು ಒಂದು ಸಾರಿ ವರದಿ ಕೇಳಿದ್ದೆ. ಅವರು ಕೊಡ್ತೀನಿ ಎಂದಿದ್ದರು. ಆದರೆ, ಆ ವರದಿಯನ್ನು ನಮ್ಮ ಸರ್ಕಾರಕ್ಕೆ ಕೊಡಲಿಲ್ಲ” ಎಂದರು.