ಹುಬ್ಬಳ್ಳಿ, ನ.4- ತಮಿಳುನಾಡು ಸರ್ಕಾರ ಜಾರಿಗೆ ತಂದಿರುವ ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ವೈದ್ಯಕೀಯ ಶಿಕ್ಷಣದಲ್ಲಿ ಶೇ.7.5 ಮೀಸಲಾತಿ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೊಳಿಸಲು ಕಾಯ್ದೆ ರೂಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ತಮಿಳುನಾಡು ಸರ್ಕಾರ ಅಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿರುವ ಬಡಮಕ್ಕಳಿಗೆ ವೈದ್ಯಕೀಯ ಸೀಟುಗಳಲ್ಲಿ ಶೇ.7.5 ಮೀಸಲಿಡಲು ನಿರ್ಧರಿಸಿದೆ.ಈ ಸಂಬಂಧ ಅಲ್ಲಿನ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.
ಇದು ನಿಜಕ್ಕೂ ಮಾದರಿ. ಅದೇ ರೀತಿಯ ಕಾನೂನನ್ನು ಕರ್ನಾಟಕದಲ್ಲೂ ಜಾರಿಗೊಳಿಸಬೇಕು ಎಂದರು. ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟುಗಳು ಗಗನ ಕುಸುಮವಾಗಿವೆ. ಕಾನೂನು, ಶಿಕ್ಷಣ ತಜ್ಞರು ಮತ್ತು ಮೇಧಾವಿಗಳೊಂದಿಗೆ ಚರ್ಚಿಸಿ ಈ ರೀತಿ ಕಾನೂನನ್ನು ಕರ್ನಾಟಕದಲ್ಲೂ ಜಾರಿ ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ನೆರೆ ರಾಜ್ಯದಲ್ಲಿ ಅವರ ಮಾತೃ ಭಾಷೆಗೆ ಇರುವಷ್ಟು ಕಾಳಜಿ ನಮ್ಮ ರಾಜ್ಯದಲ್ಲಿ ಇಲ್ಲವೇ? ಅದರಲ್ಲಿಯೂ ರಾಜಧಾನಿ ಬೆಂಗಳೂರಿನಲ್ಲಿ ಕೇವಲ ಶೇ.23ರಷ್ಟು ಕನ್ನಡಿಗರು, ಅವರಲ್ಲಿ ಎಷ್ಟು ಜನ ಕನ್ನಡ ಮಾತನಾಡುತ್ತಾರೋ ಅಥವಾ ಅವರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳುಹಿಸುತ್ತಾರೋ ಗೊತ್ತಿಲ್ಲ.
ರಾಜ್ಯದಲ್ಲಿ ದಿನೇ ದಿನೇ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹೀಗಾಗಿ ವೈದ್ಯಕೀಯ ಸೀಟುಗಳಲ್ಲಿ ಮೀಸಲಾತಿ ಕಲ್ಪಿಸುವ ಗಟ್ಟಿ ನಿರ್ಧಾರ ಕೈಗೊಂಡರೆ ಸಾವಿರಾರು ಮಕ್ಕಳಿಗೆ ಅನುಕೂಲವಾಗುತ್ತದೆ. ಸರ್ಕಾರಿ ಶಾಲೆಗಳಿಗೂ ಬೇಡಿಕೆ ಹೆಚ್ಚಾಗುತ್ತದೆ ಎಂದು ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.