ರಾಯಚೂರು: ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿದ ಲಾರಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಕಂಡಕ್ಟರ್ ಸೇರಿದಂತೆ 15ಕ್ಕೂ ಪ್ರಯಾಣಿಕರು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದಲ್ಲಿ ಶನಿವಾರ ನಡೆದಿದೆ.
ಬಸ್ ಸಿಂಧನೂರಿನಿಂದ ಅಂಕಲಿಮಠಕ್ಕೆ ಕಡೆಗೆ ಹೋಗುವಾಗ ಮಾರ್ಗದ ಮಧ್ಯದಲ್ಲಿ ಈ ದುರ್ಘಟನೆ ನಡೆದಿದೆ. ಲಾರಿಯೊಂದು ಪಂಚರ್ ಆಗಿ ರಸ್ತೆ ಪಕ್ಕದಲ್ಲಿ ನಿಂತಿತ್ತು. ಆದರೆ, ರಾತ್ರಿ ವೇಳೆಯಲ್ಲಿ ಲಾರಿ ನಿಲುಗಡೆ ಮಾಡಿರುವುದನ್ನು ಸೂಚಿಸಲು ಇಂಡಿಕೇಟರ್ ಆನ್ ಮಾಡಿರಲಿಲ್ಲ. ಕತ್ತಲು ಕವಿದಿದ್ದು, ಎದುರುಗಡೆ ಬಂದ ಬೈಕ್ ಅನ್ನು ತಪ್ಪಿಸಲು ಹೋದ ಪರಿಣಾಮ ಬಸ್ ಚಾಲಕನು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
15ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಂಬ್ಯುಲೆನ್ಸ್ ಸಹಾಯದಿಂದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಹಾಗೂ ಬಳ್ಳಾರಿ, ರಾಯಚೂರು ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಂಧನೂರು ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.