ಬೆಂಗಳೂರು: ”ಹಿಂದೂ ಧರ್ಮದ ವಿರುದ್ದ ಅವಹೇಳನಕಾರಿಯಾಗಿ ನಾನು ಮಾತನಾಡಿಲ್ಲ. ನಾವೆಲ್ಲಾ ಹಿಂದೂಗಳು” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಹಿಂದೂ ಧರ್ಮ ಬಗ್ಗೆ ವಿವಾದಿತ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ”ಅದನ್ನು ಬೇರೆ ರೀತಿ ಅರ್ಥೈಸುವ ಕೆಲಸವನ್ನು ನಾನು ಯಾವತ್ತು ಮಾಡಿಲ್ಲ. ನಾವೆಲ್ಲ ಹಿಂದೂಗಳು. ಬೆಳಗ್ಗೆ ಎದ್ದರೆ ಗಣಪತಿಯನ್ನು ನೆನಪು ಮಾಡಿಕೊಳ್ತೀವಿ. ನಾನು ಬೆಳಗ್ಗೆ ಎದ್ದ ಕೂಡಲೇ ಲಕ್ಷ್ಮಿ ಶ್ಲೋಕ ಹೇಳುತ್ತೇನೆ. ಮಲಗೋವಾಗ ಹನುಮಾನ್ ಶ್ಲೋಕ ಹೇಳ್ತೀನಿ ಎಂದು ಎರಡು ಶ್ಲೋಕಗಳನ್ನು ಹೇಳಿ, ಬಿಜೆಪಿ ಅವರಿಗೆ ಈ ಶ್ಲೋಕಗಳು ಬರುವುದಿಲ್ಲ. ಅವರಿಗೆ ಕೇಳಿ ನೋಡಿ, ಹೇಳ್ತಾರಾ” ಎಂದು ಸವಾಲು ಹಾಕಿದರು.
”ಧರ್ಮ ಅಧರ್ಮ ಆದಾಗ, ನೀತಿ ಅನೀತಿ ಆದಾಗ ಕೃಷ್ಣ ಮತ್ತೆ ಹುಟ್ಟಿ ಬರುತ್ತೇನೆ ಅಂತ ಹೇಳುತ್ತಾನೆ. ಇದನ್ನೆ ನಾನು ಹೇಳಿದ್ದು, ಯಧಾ ಯಧಾಹೀ ಧರ್ಮಸ್ಯ ಅಂತ. ಹಿಂದೂ ಧರ್ಮ ಯಾವಾಗ ಹುಟ್ಟಿತು ಅಂತ ನಾನು ಪ್ರಶ್ನೆ ಮಾಡಿಲ್ಲ. ನಾನು ಹೇಳಿದ್ದು ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಈ ದೇಶದಲ್ಲಿ ಹುಟ್ಟಿದ ಧರ್ಮದ ಬಗ್ಗೆ ಸ್ಟಡಿ ಮಾಡಿದ್ರು. ಅದನ್ನು ನಾನು ಹೇಳಿದ್ದು. ಅವರು ಹೇಳಿದ್ದನ್ನು ನಾನು ಹೇಳಿದ್ದು. ಅವರ ಪ್ರಕಾರ ಜೈನ, ಮುಸ್ಲಿಂ ಧರ್ಮ ಸ್ಥಾಪನೆ ಮಾಡಿದವರು ಇದ್ದರು. ಆದರೆ, ಹಿಂದೂಧರ್ಮಕ್ಕೆ ಇಲ್ಲ ಅಂತ ಹೇಳಿದ್ದರು. ಅಷ್ಟು ಹೇಳಿದ್ದಕ್ಕೆ ಬಿಜೆಪಿ ಅವರು ಬೊಬ್ಬೆ ಹೊಡೆಯುತ್ತಿದ್ದಾರೆ. ಹಿಂದೂ ಧರ್ಮದ ಮೇಲೆ ನಮಗೆ ಇರೋ ಗೌರವ ಅವರಿಗೆ ಇದೆಯಾ” ಎಂದು ಪ್ರಶ್ನಿಸಿದರು.
ಬಿಜೆಪಿ ಆರೋಪ ತಳ್ಳಿ ಹಾಕಿದ ಜಿ ಪರಮೇಶ್ವರ್: ಬಿಜೆಪಿಯಿಂದ ಡಿಜಿಪಿಗೆ ದೂರು ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ”ನಾವು ಅನಗತ್ಯವಾಗಿ ಯಾರ ಖಾಸಗಿ ಜೀವನದಲ್ಲಿ ಎಂಟ್ರಿ ಆಗುವುದಿಲ್ಲ. ಯಾರಾದರೂ ದೂರು ಕೊಟ್ರೆ ಪೊಲೀಸ್ ಇಲಾಖೆ ಏನು ಮಾಡಬೇಕು. ದೂರಿನ ಮೇಲೆ ಕ್ರಮ ತೆಗೆದುಕೊಂಡು ಎಫ್ ಐಆರ್ ಮಾಡಿ, ತನಿಖೆ ಮಾಡಬೇಕು. ಚಾರ್ಜ್ ಶೀಟ್ ಹಾಕುವ ಹಂತ ಇದ್ದರೆ ಹಾಕ್ತಾರೆ. ಇಲ್ಲ ಪ್ರಕರಣ ಕೈ ಬಿಡ್ತಾರೆ. ಅದನ್ನು ಮಾಡಬೇಡಿ ಅಂದ್ರೆ ಪೊಲೀಸ್ ಇಲಾಖೆ ಯಾಕೆ ಇರಬೇಕು. ನ್ಯೂನತೆ ಕಂಡು ಬಂದರೆ ನಮ್ಮ ಗಮನಕ್ಕೆ ತರಲಿ. ನಾವು ಅದನ್ನ ಸರಿ ಪಡಿಸೋಣ. ಆದರೆ, ಯಾರು ಮಾತಾಡಿಸಲೇ ಬಾರದು, ಆ ಪಕ್ಷ ಈ ಪಕ್ಷ ಅಂತ ಹೇಳೋದು ಸರಿಯಲ್ಲ. ಯಾವ ಪಕ್ಷದವರು ಅಂತ ನಾವು ನೋಡುವುದಿಲ್ಲ. ಕಾನೂನು ವಿರುದ್ಧವಾಗಿ ಕೆಲಸ ಮಾಡ್ತಾರೆ, ಅವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುತ್ತೆ. ಅದನ್ನೇ ನಾವು ಮಾಡುತ್ತೇವೆ. ಅದನ್ನು ಮಾಡಿಲ್ಲ ಅಂದರೆ ಸಮಾಜದಲ್ಲಿ ಶಿಸ್ತು ಇರೊಲ್ಲ. ಘಟನೆಗಳು ನಡೆಯುತ್ತವೆ. ಅದಕ್ಕೆ ಪೊಲೀಸ್ ಇಲಾಖೆ ಇರೋದು” ಎಂದರು.