ನವದೆಹಲಿ: ಭಾರತ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಎಂಬುದೊಂದು ದೊಡ್ಡ ಅಧ್ಯಾಯ. ಕೋಟ್ಯಂತರ ಅಭಿಮಾನಿಗಳ ಕಣ್ಮಣಿ. ಸಚಿನ್ ಆಟವನ್ನು ನೋಡಿ ಬೆಳೆದವರು ಇಂದು ರಾಷ್ಟ್ರೀಯ ತಂಡದಲ್ಲಿ ಮಿಂಚುತಿದ್ದಾರೆ. ದೇಶಿ ಮತ್ತು ವಿದೇಶಿ ಅಭಿಮಾನಿಗಳಿಗೂ ಇವರು ‘ಗಾಡ್ ಆಫ್ ಕ್ರಿಕೆಟ್’. ಇದೀಗ ಸಚಿನ್ ತಮ್ಮ ಇನ್ನೊಂದು ಮಹತ್ತರ ಜವಾಬ್ದಾರಿಯುತ ನಾಗರಿಕ ಪಾತ್ರ ನಿರ್ವಹಿಸಲು ಮುಂದಾಗಿದ್ದಾರೆ. ಭಾರತೀಯ ಚುನಾವಣಾ ಆಯೋಗವು (ಇಸಿಐ) ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟಿಗನನ್ನು ತನ್ನ ರಾಷ್ಟ್ರೀಯ ರಾಯಭಾರಿ ಎಂದು ಗುರುತಿಸಿದೆ.
2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಚಿನ್ ಮತದಾನ ಜಾಗೃತಿ ಮೂಡಿಸಲು ಕೇಂದ್ರ ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ದೇಶದ ನಾಗರಿಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಿದ್ದಾರೆ. ‘ಶತಕಗಳ ಶತಕ’ ಗಳಿಸಿದ ಮಹೋನ್ನತ ದಾಖಲೆ ಹೊಂದಿರುವ ಸಚಿನ್, ಮುಂದಿನ ಚುನಾವಣೆಯಲ್ಲಿ ಯುವ ಮತ್ತು ಮೊದಲ ವೋಟರ್ಗಳಿಗೆ ಸ್ಫೂರ್ತಿ ತುಂಬಲಿದ್ದಾರೆ.
“ಕ್ರಿಕೆಟ್ ದಂತಕಥೆ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಚಿನ್ ರಮೇಶ್ ತೆಂಡೂಲ್ಕರ್ ಅವರು ಹೊಸ ಇನ್ನಿಂಗ್ಸ್ ಅನ್ನು ‘ರಾಷ್ಟ್ರೀಯ ಐಕಾನ್’ ಆಗಿ ಪ್ರಾರಂಭಿಸಲಿದ್ದಾರೆ. ಮತದಾನದ ಕುರಿತು ಜಾಗೃತಿ ಮತ್ತು ಶಿಕ್ಷಣ ನೀಡಲಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ, ಅರುಣ್ ಗೋಯೆಲ್ ಅವರ ಸಮ್ಮುಖದಲ್ಲಿ ಕಳೆದ ಬುಧವಾರ ರಾಷ್ಟ್ರ ರಾಜಧಾನಿಯ ಆಕಾಶವಾಣಿಯ ರಂಗ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಚಿನ್, ಮೂರು ವರ್ಷಗಳ ಅವಧಿಗೆ ಇಸಿಐ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ತಿಳಿಸಿದೆ. ಭಾರತದಲ್ಲಿ ಸಚಿನ್ ತೆಂಡೂಲ್ಕರ್ಗೆ ಅಪಾರ ಯುವ ಅಭಿಮಾನಿಗಳಿದ್ದು, ವಿಶೇಷವಾಗಿ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರ ಭಾಗವಹಿಸುವಿಕೆ ಹೆಚ್ಚಿಸಲು ಈ ಒಪ್ಪಂದ ಸಹಕಾರಿಯಾಗಲಿದೆ ಎಂದು ಇಸಿಐ ಆಶಿಸಿದೆ.