ಬೆಂಗಳೂರು : ರಸ್ತೆಬದಿಯಲ್ಲಿ ಮಾರಾಟಕ್ಕಿಡುತ್ತಿದ್ದ ಎಳನೀರನ್ನು ಕದ್ದು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಟಾಟಾ ಏಸ್ ವಾಹನದಲ್ಲಿ ಬಂದು 1,500 ಎಳನೀರು ಕದ್ದು ತಲೆಮರೆಸಿಕೊಂಡಿದ್ದ ಗೌತಮ್, ರಘು ಹಾಗೂ ಮಣಿಕಂಠ ಬಂಧಿತ ಆರೋಪಿಗಳು.
ಪ್ರಕರಣದ ಸಂಪೂರ್ಣ ವಿವರ: ಜಯನಗರ ರಾಷ್ಟ್ರೀಯ ವಿದ್ಯಾಲಯ ಮೆಟ್ರೊ ನಿಲ್ದಾಣದ ಸಮೀಪ ರಾತ್ರೋರಾತ್ರಿ ಟಾಟಾ ಏಸ್ ವಾಹನದ ನಂಬರ್ ಪ್ಲೇಟಿಗೆ ಮಸಿ ಬಳಿದು ಬರುತ್ತಿದ್ದ ಆರೋಪಿಗಳು ಎಳನೀರು ಅಂಗಡಿಗಳಲ್ಲಿ ನಿರಂತರವಾಗಿ ಕಳ್ಳತನ ಮಾಡುತ್ತಿದ್ದರು. ಆಗಸ್ಟ್ 7ರಂದು ಮುಂಜಾನೆ ಕಳ್ಳತನ ಮಾಡಿದ್ದ ಆರೋಪಿಗಳ ವಿರುದ್ಧ ಅಂಗಡಿ ಮಾಲೀಕ ಸಲೀಂ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಘಟನಾ ಸ್ಥಳದಲ್ಲಿ ಆರೋಪಿಗಳ ಯಾವುದೇ ಸುಳಿವು ದೊರೆತಿರಲಿಲ್ಲ. ಸಿಸಿಟಿವಿ ದೃಶ್ಯ ಆಧರಿಸಿ ಟಾಟಾ ಏಸ್ ವಾಹನ ಹೋದ ದಾರಿಯನ್ನೇ ಬೆನ್ನುಬಿದ್ದ ಪೊಲೀಸರು 60ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದರು. ಆರೋಪಿಗಳು ಉತ್ತರಹಳ್ಳಿ ಬಳಿ ಟೀ ಕುಡಿದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಟೀ ಕುಡಿದು ಅಂಗಡಿಗೆ ಬಂದ ಆರೋಪಿಗಳು ಯುಪಿಐ ಮೂಲಕ ಹಣ ಪಾವತಿಸಿದ್ದರು.