ಚಿಕ್ಕೋಡಿ: ಹಿರೇಕೊಡಿ ನಂದಿ ಪರ್ವತ ಮಹಾರಾಜರ ಹತ್ಯೆಯಿಂದ ಭಾರತದ ಅಧ್ಯಾತ್ಮ ಪರಂಪರೆಗೆ ಧಕ್ಕೆ ಆಗಿದೆ. ಒಕ್ಕೊರಲಾಗಿ ಖಂಡಿಸಿ ನ್ಯಾಯ ಕೊಡಿಸುವ ಕೆಲಸ ಎಲ್ಲರೂ ಕೂಡಿ ಮಾಡಬೇಕು. ನೊಂದ ಮನಸ್ಸುಗಳಿಗೆ ಧೈರ್ಯ ಹೇಳಿ ಮುಂದೆ ಈ ರೀತಿ ಘಟನೆ ಆಗದಂತೆ ಎಲ್ಲರೂ ಸಾಮೂಹಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಆಶ್ರಮಕ್ಕೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಈ ಘಟನೆಯಿಂದ ಇಡೀ ಕರ್ನಾಟಕ ತಲೆ ತಗ್ಗಿಸಿದಂತಾಗಿದೆ. ಭಾರತ ಯಾವತ್ತೂ ಅಧ್ಯಾತ್ಮ ರಕ್ಷಣಾ ಭೂಮಿ ಅಂತ ತೋರಿಸಬೇಕಿದೆ. ಈ ರೀತಿಯ ಘಟನೆ ದೇಶದಲ್ಲಿ ಹಿಂದೆಂದೂ ಆಗಿಲ್ಲ. ಇಷ್ಟರಮಟ್ಟಿಗೆ ಮನುಷ್ಯನ ಮನಸ್ಸು ವಿಕಾರಗೊಂಡಿದ್ದು ವಿಚಿತ್ರವಾಗಿದೆ. ಇಂತಹ ವಿಚಾರ ವಿಷಯಾಂತರ ಮಾಡದೇ ನ್ಯಾಯ ಒದಗಿಸುವ ಕೆಲಸ ಆಗಲಿ. ಧರ್ಮಗುರುಗಳಿಗೆ ತೊಂದರೆ ಆಗದ ರೀತಿ ಎಚ್ಚರ ವಹಿಸಬೇಕಿರೋದು ದೇಶದ 125 ಕೋಟಿ ಜನರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.
ಈ ಘಟನೆ ಇಡೀ ಯತಿಕುಲವೇ ತಲೆಬಾಗುವಷ್ಟು ನೋವಾಗಿದೆ. ಭಾರತ ದೇಶದ ಆಧ್ಯಾತ್ಮಿಕ ಚರಿತ್ರೆಯಲ್ಲಿ ಧರ್ಮಗರುಗಳ ಬರ್ಬರ ಹತ್ಯೆ ಮಾಡಿದ್ದು ನಾಡಿನ ಅಧ್ಯಾತ್ಮಿಕ ಪರಂಪರೆಗೆ ನಿರಾಶೆಯಾಗಿ ದಿಗ್ಭ್ರಮೆ ಉಂಟಾಗಿದೆ. ಇಂತಹ ಘಟನೆ ಯಾವ ಕಾರಣಕ್ಕೂ ಈ ದೇಶದಲ್ಲಿ ನಡೆಯಬಾರದಿತ್ತು. ನಮ್ಮ ಎರಡೂ ಸರ್ಕಾರ ಈ ರೀತಿ ಆಗದ ಹಾಗೇ ಎಚ್ಚರ ವಹಿಸುವ ಅವಶ್ಯಕವಿದೆ ಎಂದು ಹೇಳಿದರು.