ಕಲಬುರಗಿ: ಧಾರ್ಮಿಕ ಗಲಭೆಗೆ ಕಾರಣವಾಗುತ್ತಿದ್ದ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ಒಳ್ಳೆಯದು.
ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆದು ಒಬ್ಬರ ಆಹಾರ ಸಂಸ್ಕೃತಿಯನ್ನು ರಕ್ಷಿಸಿದಂತೆ ಆಗಲಿದೆ ಎಂದು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನದ ಪರಿಚ್ಛೇದ 25ರ ಅಡಿ ಮತಾಂತರಗೊಳ್ಳುವುದು ಕಾನೂನು ಬದ್ಧವಾಗಿದೆ. ಅದು ಧಾರ್ಮಿಕ ಹಕ್ಕೂ ಆಗಿದೆ. ಆದಾಗ್ಯೂ, ಬಲವಂತದಿಂದ ಮತಾಂತರ ಮಾಡುವುದು ತಪ್ಪು. ತಮಗಿಷ್ಟ ಬಂದಂತಹ ಧರ್ಮವನ್ನು ಆಯ್ದುಕೊಳ್ಳುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ನಿರ್ಧಾರ ಒಳ್ಳೆಯದು ಎಂದರು.
ಇನ್ನು ಗೋಹತ್ಯೆ ನಿಷೇಧ ಕಾಯ್ದೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟ ಚೇತನ್, ಇಡೀ ಜಗತ್ತಿನಲ್ಲಿ ಮಾಂಸ ರಫ್ತು ಮಾಡುವ ದೇಶಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ವಿದೇಶಗಳಿಗೆ ಮಾಂಸ ರಫ್ತು ಮಾರಾಟ ಮಾಡುವ ನಿಟ್ಟಿನಲ್ಲಿ ಪ್ರಾಣಿಗಳ ಹತ್ಯೆ ನಿಲ್ಲಬೇಕು. ಆದ್ರೆ, ಕೆಲವೊಂದು ಸಮುದಾಯಗಳು ಮಾಂಸಾಹಾರ ಸೇವಿಸುವ ಆಹಾರ ಸಂಸ್ಕೃತಿಯನ್ನು ಹೊಂದಿವೆ. ಅಂತವರ ಆಹಾರಕ್ಕೆ ಕಡಿವಾಣ ಹಾಕೋದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಸರ್ಕಾರ ಐದು ಭಾಗ್ಯಗಳನ್ನು ಜಾರಿ ಮಾಡಿ, ಕ್ರಾಂತಿ ಮಾಡಿದವರ ರೀತಿ ಮಾಡ್ತಿದ್ದಾರೆ. ಆದ್ರೆ, ಮಾಡಬೇಕಾದ ಕೆಲಸಗಳು ಇನ್ನೂ ಬಹಳಷ್ಟಿವೆ. ಸರ್ಕಾರ ಅಕ್ಕಿಯನ್ನು ಉಚಿತವಾಗಿ ನೀಡಬೇಕು. ಜೊತೆಗೆ, ಹೆಚ್ಚಿನ ಹಣವನ್ನು ಕೂಡ ಬಡವರಿಗೆ ನೀಡಬೇಕು. ಶ್ರೀಮಂತರಿಗೆ ಹೆಚ್ಚಿನ ತೆರಿಗೆಯನ್ನು ಹಾಕಿ ಬಡವರಿಗೆ ನೀಡಬೇಕು. ಕರೆಂಟ್ ಬಿಲ್ ಹೆಚ್ಚು ಮಾಡಿ ಬಡವರಿಂದ ಕಿತ್ತು ಬಡವರಿಗೆ ನೀಡೋದನ್ನು ಬಿಡಬೇಕು. ಇಂತಹ ಗ್ಯಾರಂಟಿ ಯೋಜನೆಗಳು ಕೇವಲ ಸಣ್ಣಪುಟ್ಟ ಸಂಗತಿಗಳಿಗಾಗಿ ಜಾರಿ ಮಾಡಿರಬಹುದು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಒತ್ತು ನೀಡುವಂತಹ ಕೆಲಸ ಆಗಬೇಕು ಎಂದು ಹೇಳಿದರು.