ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಹಿಮ್ಲಪುರ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಉಲ್ಬಣಗೊಂಡಿದ್ದು, ಕಳೆದ ಮೂರು ದಿನಗಳಿಂದ 40ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಶನಿವಾರ 4, ಭಾನುವಾರ 2, ಸೋಮವಾರ 8 ಹಾಗೂ ಮಂಗಳವಾರ 14ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ. ಆದ್ರೆ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಕಂಡುಬರುವುದಕ್ಕೆ ಮೂಲ ಕಾರಣ ತಿಳಿದುಬಂದಿಲ್ಲ.
ಹಿಮ್ಲಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸೆ ಕೇಂದ್ರ ತೆರೆಯಲಾಗಿದ್ದು, 15 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುರುಮಠಕಲ್ನ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ 12 ಜನರು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ 5 ಜನ ಮತ್ತು ರಾಯಚೂರು ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಯಾವಾಗ ಬಂದರೂ ವೈದ್ಯಾಧಿಕಾರಿ ಇರುವುದೇ ಇಲ್ಲ. ಆಸ್ಪತ್ರೆಯಲ್ಲಿ ಔಷಧಗಳು ಸಹ ಸರಿಯಾಗಿ ಸಿಗುವುದಿಲ್ಲ ಎಂದು ಗಾಜರಕೋಟ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ರಾಹೀಲ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲೇ ಇದ್ದ ಟಿಹೆಚ್ಒ ಡಾ. ಹಣಮಂತರೆಡ್ಡಿ ವೈದ್ಯರ ಅವ್ಯವಸ್ಥೆ ಕುರಿತು ಮೇಲಾಧಿಖಾರಿಗಳಿಗೆ ವರದಿ ನೀಡುತ್ತೇನೆ. ನೀವು ಲಿಖಿತ ದೂರು ಕೊಡಿ, ಅವರ ಮೇಲೆ ಖಂಡಿತವಾಗಿಯೂ ಕ್ರಮ ವಹಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.