ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತುಂತುರು ಮಳೆಯಿಂದ ರಕ್ಷಣೆ ಪಡೆಯಲು ಹಿಡಿದಿದ್ದ ಆರ್ಸಿಬಿ ಛತ್ರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಶಿರಾ ಉಪ ಚುನಾವಣೆಯ ಪ್ರಚಾರದಲ್ಲಿ ಡಿಕೆ ಶಿವಕುಮಾರ್ ಅವರು ಬ್ಯುಸಿಯಾಗಿದ್ದು, ಈ ವೇಳೆ ಶಿರಾದ ದೊಡ್ಡ ಆಲದ ಮರ ಬಳಿ ಪ್ರಚಾರ ಕಾರ್ಯದಲ್ಲಿದ್ದ ಸಂದರ್ಭದಲ್ಲಿ ದಿಢೀರ್ ಎಂದು ತುಂತುರು ಮಳೆ ಆರಂಭವಾಗಿತ್ತು. ಮಳೆ ಆರಂಭವಾಗುತ್ತಿದಂತೆ ಪ್ರಚಾರ ವಾಹನದಲ್ಲಿದ್ದ ಕಾರ್ಯಕರ್ತರು ಸಮೀಪದಲ್ಲೇ ಇದ್ದ ಅಂಗಡಿಯಿಂದ ಛತ್ರಿಯನ್ನು ತಂದಿದ್ದರು. ತುಂತುರು ಮಳೆಯ ನಡುವೆಯೂ ಕಾಂಗ್ರೆಸ್ ಪಕ್ಷದ ನಾಯಕರು ಪ್ರಚಾರವನ್ನು ಮುಂದುವರಿಸಿದ್ದರು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಛತ್ರಿ ಹಿಡಿದಿರುವ ಡಿಕೆ ಶಿವಕುಮಾರ್ ಅವರ ಫೋಟೋಗಳನ್ನು ಆರ್ಸಿಬಿ ಅಭಿಮಾಣಿಗಳು ವೈರಲ್ ಮಾಡಿದ್ದಾರೆ. ಈ ಫೋಟೋಗಳಿಗೆ ಕಾಮೆಂಟ್ ಮಾಡಿರುವ ಕೆಲವರು, ಡಿಕೆ ಶಿವಕುಮಾರ್ ಆರ್ಸಿಬಿ ಛತ್ರಿ ಹಿಡಿದ ಮೇಲೆ ಗೆಲುವಿನ ಲಕ್ಷ್ಮೀ ಆರ್ಸಿಬಿಗೆ ಒಲಿಯಿತು ಎಂದು ಬರೆದುಕೊಂಡಿದ್ದಾರೆ. ಮತ್ತೆ ಕೆಲವರು ಡಿಕೆ ಶಿವಕುಮಾರ್ ಅವರಿಗೂ ಗೊತ್ತಾಗಿದೆ ಈ ಸಲ ಕಪ್ ನಮ್ದೆ ಅಂತಾ ಎಂದು ಹೇಳಿದ್ದಾರೆ.