ಕೊಪ್ಪಳ : ಬಿಜೆಪಿ ಸರ್ಕಾರದ ದುರಹಂಕಾರ, ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ.
ರಾಜ್ಯದ ಜನತೆ ಒಂದು ಸ್ಪಷ್ಟ ಬಹುಮತದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ನಿರ್ಧರಿಸಿರುವುದು ಈ ಚುನಾವಣೆಯ ಫಲಿತಾಂಶದಿಂದ ಗೊತ್ತಾಗುತ್ತದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಳ್ಳಾರಿಯಿಂದ ಗಂಗಾವತಿ ಜನರನ್ನು ನಂಬಿಕೊಂಡು ಬಂದಿದ್ದೆ. ನನ್ನ ಕೈ ಬಿಡದೇ ಇಲ್ಲಿನ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಗಂಗಾವತಿಯಲ್ಲಿ ನಾನು ಊಹಿಸಿಕೊಂಡಿದ್ದಕ್ಕಿಂತ ಕಡಿಮೆ ಅಂತರದಲ್ಲಿ ಗೆಲುವು ಉಂಟಾಗಿದೆ. ನನ್ನ ಗೆಲುವಿಗೆ ಕಾರಣರಾದ ಗಂಗಾವತಿ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಅತಂತ್ರ ಸರ್ಕಾರಗಳು ಆಡಳಿತಕ್ಕೆ ಬರುತ್ತಿದ್ದವು. ಈ ಸರ್ಕಾರಗಳು ಸರಿಯಾದ ಆಡಳಿತ ನಡೆಸಿಲ್ಲ. ಅಲ್ಲದೇ ಬಿಜೆಪಿ ಸರ್ಕಾರಕ್ಕೆ ಬಹುಮತ ಬಂದರೂ ಇಲ್ಲಿನ ಭ್ರಷ್ಟಾಚಾರ, ದುರಾಡಳಿತದಿಂದಾಗಿ ಜನರು ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಬೇಕೆಂದು ನಿರ್ಧರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಬೇಕು ಎಂದು ಜನರು ತೀರ್ಮಾನಿಸಿರುವುದು ಈ ರಿಸಲ್ಟ್ನಿಂದ ಗೊತ್ತಾಗುತ್ತದೆ ಎಂದರು.