ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ನೆರವೇರಿತು. ಕೆಲವೆಡೆ ಮತಯಂತ್ರ ದೋಷ, ವಿ.ವಿ.ಪ್ಯಾಟ್ ಸಮಸ್ಯೆಗಳು ಎದುರಾದವಾದರೂ ಅಧಿಕಾರಿಗಳು ಕೂಡಲೇ ಪರ್ಯಾಯ ಕ್ರಮ ಕೈಗೊಂಡರು. 5,30,85,566 ಸಾಮಾನ್ಯ, 47,488 ಸೇವಾ ಮತದಾರರು ಸೇರಿ ಒಟ್ಟು 5,31,33,054 ಮಂದಿ ಮತದಾನದ ಹಕ್ಕು ಹೊಂದಿದ್ದು, ಶೇ.73 ಮತದಾನವಾಗಿದೆ.
2615 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿವೆ. ಬೆಳಗ್ಗೆ ಮತದಾನ ನೀರಸವಾಗಿತ್ತು. ಹೊತ್ತು ಏರುತ್ತಿದ್ದಂತೆ ಮತಗಟ್ಟೆ ಬಳಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು.
ಮೊದಲ ಮತದಾನದ ಸಂಭ್ರಮ: ಮೊದಲ ಮತದಾನ ಮಾಡಿದ ಯುವಕ/ಯುವತಿಯರ ಸೆಲ್ಪಿ ಸಂಭ್ರಮ ಎಲ್ಲೆಡೆ ಕಂಡುಬಂತು. ವೃದ್ಧರು, ಕಾಯಿಲೆಯಲ್ಲಿ ನರಳುತ್ತಿರುವವರು, ಆಸ್ಪತ್ರೆಯಲ್ಲಿ ದಾಖಲಾದವರು ಬಂದು ಮತದಾನ ಮಾಡಿ ಅಚ್ಚರಿ ಮೂಡಿಸಿದರು. ಐಟಿ ಉದ್ಯೋಗಿಗಳಿಗೆ ಮಾದರಿ: ಇನ್ಪೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಜಯನಗರ ಬಿಇಎಸ್ ಕಾಲೇಜಿನ ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮತದಾನದ ಬಳಿಕ ಮಾಧ್ಯಮ ಕ್ಯಾಮೆರಾಗಳ ಮುಂದೆ ಶಾಯಿ ಹಚ್ಚಿದ ಬೆರಳು ತೋರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜನರು ಮತದಾನ ಮಾಡಬೇಕು ಎಂದು ಕರೆ ನೀಡಿ, ಮತದಾನದಿಂದ ದೂರ ಉಳಿಯುವ ಐಟಿ ಉದ್ಯೋಗಿಗಳಿಗೆ ದಾರಿದೀಪವಾದರು. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ತಮ್ಮ ಹಕ್ಕು ಚಲಾಯಿಸಿದ ಚುನಾವಣೆಯ ರಾಯಭಾರಿ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಎಲ್ಲರೂ ಮತದಾನ ಮಾಡುವಂತೆ ವಿನಂತಿ ಮಾಡಿದರು.
ಜಾಲಿ ಮೂಡ್ಗೆ ಜಾರಿದ ಅಭ್ಯರ್ಥಿಗಳು…: ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು, ಸ್ಟಾರ್ ಪ್ರಚಾರಕರು, ಪಕ್ಷಗಳ ಪ್ರಮುಖ ಕಾರ್ಯಕರ್ತರು ನಿರುಮ್ಮಳರಾಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಬೇಸಿಗೆಯ ಬಿಸಿಲಿನಿಂದ ತತ್ತರಿಸಿದ್ದ ಅಭ್ಯರ್ಥಿಗಳು ಮತ್ತು ಸ್ಟಾರ್ ಪ್ರಚಾಕರು ಜಾಲಿ ಮೂಡ್ಗೆ ಜಾರಿದ್ದಾರೆ. ಸಂಜೆ ಮತದಾನ ಮುಗಿದ ಕೂಡಲೇ ಅನೇಕ ನೇತಾರರು ಮನೆ ಸೇರಿದ್ದಾರೆ. ಕೆಲವರು ತಮ್ಮ ಆಪ್ತರೊಂದಿಗೆ ರೆಸಾರ್ಟ್ ಮತ್ತಿತರ ಕಡೆ ವಿಶ್ರಾಂತಿಗೆ ತೆರಳಿದ್ದಾರೆ ಎನ್ನಲಾಗಿದೆ.