ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾದ ಹಿನ್ನೆಲೆಯಲ್ಲಿ ಪ್ರಚಾರ ಅಖಾಡಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಳಿದಿದ್ದಾರೆ.
ಅಂತೆಯೇ ರೇಷ್ಮೆನಗರಿ ರಾಮನಗರ ಜಿಲ್ಲೆಗೆ ಶನಿವಾರ ದೊಡ್ಡಗೌಡ್ರು ಭೇಟಿ ನೀಡಿ, ಕೆಂಪೇಗೌಡ ಕೋಟೆ ಮಾಗಡಿಯಲ್ಲಿ ಜೆಡಿಎಸ್ ಸಮಾವೇಶದಲ್ಲಿ ಅಭ್ಯರ್ಥಿ ಎ.ಮಂಜುನಾಥ್ ಪರ ಪ್ರಚಾರ ನಡೆಸಿದರು.
ಹೆಲಿಕಾಪ್ಟರ್ ಮೂಲಕ ಮಾಗಡಿಗೆ ಬಂದಿಳಿದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ್ರು, ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿದ ಮಾತನಾಡಿದ ದೇವೇಗೌಡರು, ಇಂದು ಮಾಗಡಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದೇನೆ. ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ನವಲಗುಂದದಲ್ಲಿ ಪ್ರಚಾರಕಾರ್ಯ ಮುಗಿಸಿಕೊಂಡು ಬಂದಿದ್ದೇನೆ ಎಂದರು.
ಮಂಜಣ್ಣನ ಮಾತು ನನ್ನ ಹೃದಯವನ್ನು ಕರಗಿಸಿದೆ-ಹೆಚ್ ಡಿ ದೇವೇಗೌಡ: ಬೆಳಗ್ಗೆಯಿಂದಲೂ ಅನೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಎ.ಮಂಜು ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಇಂದು ಅವರ ಪರವಾಗಿ ಪ್ರಚಾರ ಮಾಡಲು ಬಂದಿದ್ದೇನೆ. ಮಂಜುಗೆ ಈ ಬಾರಿಯೂ ಗೆಲುವಾಗಲಿದೆ ಎಂದರು. ಸಮಾವೇಶದಲ್ಲಿ ಮಂಜಣ್ಣ ಅವರು ಒಂದು ಗಂಟೆಗೂ ಹೆಚ್ಚು ಸುದೀರ್ಘವಾಗಿ ಮಾತನಾಡಿದ್ದಾರೆ. ಅವರ ಮಾತು ನನ್ನ ಹೃದಯವನ್ನು ಕರಗಿಸಿದೆ. ಇಂಥ ಯೋಗ್ಯ ಅಭ್ಯರ್ಥಿಯನ್ನು ಈ ಕ್ಷೇತ್ರದ ಮಹಾಜನತೆಯ ಆಶೋತ್ತರಗಳಿಗೆ ನೆರವಾಗಿರುವಂಥಹ ಮಂಜಣ್ಣನವರನ್ನು ಮತ್ತೊಮ್ಮೆ ಕಣಕ್ಕೆ ಇಳಿಸಿದ್ದೇವೆ ಎಂದು ತಿಳಿಸಿದರು.
: