Breaking News
Home / ರಾಜಕೀಯ / ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಗೂಂಡಾಗಿರಿ ಮಾಡುತ್ತಿದ್ದರು: ಶಾಸಕ ಯತ್ನಾಳ್ ವಾಗ್ದಾಳಿ

ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಗೂಂಡಾಗಿರಿ ಮಾಡುತ್ತಿದ್ದರು: ಶಾಸಕ ಯತ್ನಾಳ್ ವಾಗ್ದಾಳಿ

Spread the love

ಬೆಳಗಾವಿ : ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್​ ಗೂಂಡಾಗಿರಿ ಮಾಡ್ತಿದ್ದರು.

ಈಗ ಅವರ ನಡೆ ನುಡಿ ನೋಡಿದ್ರೆ ಭಯ ಬರುತ್ತೆ. ಅಂಥವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದೂರು ನೀಡಿದ್ದಾರೆ. ಡಿ. ಕೆ ಶಿವಕುಮಾರ್ ನಡವಳಿಕೆ ನೋಡಿದರೆ ಈಗಲೇ ಜನರಿಗೆ ಭಯದ ವಾತಾವರಣ ಇದೆ. ಇನ್ನು ಅವರು ಮುಖ್ಯಮಂತ್ರಿ ಆದರೆ ಗತಿ ಏನು? ಇಂಥವರಿಗೆ ಅಮಿತ್ ಶಾ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಿಜಯಪುರ ಬಿಜೆಪಿ‌ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು,‌ ಡಿ ಕೆ ಶಿವಕುಮಾರ್​ ಜೈಲಿಗೆ ಹೋಗಿದ್ದು ಯಾಕೆ? ಅವರು ಸ್ವಾತಂತ್ರ್ಯ ಹೋರಾಟ ಮಾಡಿದ್ರಾ? ಮೇಕೆದಾಟಿಗಾಗಿ ಹೋರಾಟ ಮಾಡಿ ಜೈಲಿಗೆ ಹೋಗಿದ್ರಾ? ಲೂಟಿ ಮಾಡಿದ್ದರು, ಹೀಗಾಗಿ ಅವರನ್ನು ಜೈಲಿಗೆ ಹಾಕಿದ್ದರು. ಬಿಜೆಪಿಯ ಅನೇಕರ ಮೇಲೂ ಐಟಿ ರೇಡ್ ಆಗಿದೆ. ಬಿಜೆಪಿ, ಕಾಂಗ್ರೆಸ್ ಇರಲಿ ಅಥವಾ ಅತ್ಯಂತ ಪ್ರಾಮಾಣಿಕ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮನೆತನವೇ ಆಗಿರಲಿ. ಯಾರೇ ಭ್ರಷ್ಟಾಚಾರ ಮಾಡಿದರೂ ಪ್ರಧಾನಿ‌ ಮೋದಿಯವರು ಬಿಡುವುದಿಲ್ಲ ಎಂದು ತಿರುಗೇಟು ಕೊಟ್ಟರು.

ಯತ್ನಾಳ್ ಹಾಗೂ ರಮೇಶ್​ ಜಾರಕಿಹೊಳಿಯವರಿಗೆ ಅಥಣಿಯಲ್ಲಿ ಲಕ್ಷ್ಮಣ ಸವದಿಯನ್ನು ಸೋಲಿಸುವ ಜವಾಬ್ದಾರಿಯನ್ನು ಕೊಟ್ಟಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಇಡೀ ಕರ್ನಾಟಕದಲ್ಲಿ ಪ್ರಚಾರವನ್ನು ಮಾಡುತ್ತಿದ್ದೇವೆ. ಒಬ್ಬ ವ್ಯಕ್ತಿಯ ಪರವಾಗಿ ನಮ್ಮನ್ನು ಅಪಾಯಿಂಟ್​ಮೆಂಟ್​ ಮಾಡಿಲ್ಲ. ಹಾಗಿದ್ರೆ ಅಥಣಿ ಇನ್​ಚಾರ್ಜ್​ ಕೊಟ್ಟು ಅಲ್ಲಿಯೇ ಕೂರಿಸುತ್ತಿದ್ದರು. ಕಳೆದ ಬಾರಿ ಬೈ ಎಲೆಕ್ಷನ್​ನಲ್ಲಿ ಮಹೇಶ್​ ಕುಮಟಳ್ಳಿ ಬಗ್ಗೆ ಕಾಂಗ್ರೆಸ್​ನವರು ಹೀನಾಯವಾಗಿ ಮಾತನಾಡುತ್ತಿದ್ದರು. ಹಿಂದೂಗಳ ಬಗ್ಗೆ ಅವಹೇಳನ, ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿದ್ದರು ಎಂದು ಆರೋಪಿಸಿದರು.

ಬಿಜೆಪಿ ಎಂದರೆ ದಲಿತ ಮತ್ತು ಮೀಸಲಾತಿ ವಿರೋಧಿ ಎಂಬ ಹಣೆಪಟ್ಟಿಯನ್ನು ವಿಪಕ್ಷಗಳು ಕಟ್ಟಿದ್ದವು. ಹಾಲುಮತ ಎಸ್ಟಿಗೆ ಸೇರಿಸುವ ನಿಟ್ಟಿನಲ್ಲಿ ನಾನು ಹೋರಾಟ ಮಾಡಿದ್ದೆ. ಅದೇ ರೀತಿ ತಳವಾರ, ಹಡಪದ ಸೇರಿ ಸಣ್ಣಸಣ್ಣ ಸಮಾಜಗಳ ಪರವಾಗಿಯೂ ಧ್ವನಿ ಎತ್ತಿದ್ದೆ. ಈಗ ಪಂಚಮಸಾಲಿಗರಿಗೆ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಅಸಂವಿಧಾನಾತ್ಮಕವಾಗಿ ಮುಸ್ಲಿಂರಿಗೆ ನೀಡಿದ್ದ 2ಬಿ ಮೀಸಲಾತಿ ರದ್ದುಪಡಿಸಿ ಅವರಿಗೆ ಇಡಬ್ಲುಎಸ್ ನಲ್ಲಿ ಅವಕಾಶ ನೀಡಲಾಗಿದೆ. ಎಲ್ಲ ಸಮುದಾಯಗಳಿಗೆ ಬಿಜೆಪಿ ಸರ್ಕಾರ ಮೀಸಲಾತಿ ನೀಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು‌ ಹೋಗುವ ಕೆಲಸ ಮಾಡಿದೆ ಎಂದು ಸಮರ್ಥಿಸಿಕೊಂಡರು.

ಲಿಂಗಾಯತರಿಗೆ ಬಿ ಎಲ್ ಸಂತೋಷ್​ ಅಪಮಾನ ಮಾಡಿಲ್ಲ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ದಬ್ಬಾಳಿಕೆಯಿಂದ ಲಿಂಗಾಯತ ನಾಯಕರು ಒಬ್ಬೊಬ್ಬರೆ ಬಿಜೆಪಿಯಿಂದ ಹೊರ ಹೋಗುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ್​, ಸವದಿ ಅವರನ್ನು ಡಿಸಿಎಂ ಮಾಡಿದ್ದೇ ಬಿ ಎಲ್ ಸಂತೋಷ್​. ಅಲ್ಲದೇ ಅವರು ಪ್ರಧಾನ ಕಾರ್ಯದರ್ಶಿ ಆಗಿದ್ದಾಗಲೇ ಜಗದೀಶ್​ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದರು. ಅದೇ ರೀತಿ ಯಡಿಯೂರಪ್ಪ ಕೂಡ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಯಾವುದೇ ರೀತಿ ಲಿಂಗಾಯತರಿಗೆ ಬಿ ಎಲ್ ಸಂತೋಷ್​ ಅಪಮಾನ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ಲಿಂಗಾಯತರನ್ನು ಎಂದಿಗೂ ಬಿಜೆಪಿ ಕಡೆಗಣಿಸಿಲ್ಲ‌. ಮೋಸ ಮಾಡಿಲ್ಲ. ಸೋತರೂ ಕೂಡ ದೊಡ್ಡ ಅಧಿಕಾರ ನೀಡಿದೆ. ಲಿಂಗಾಯತರನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಟಿಕೆಟ್ ಕೈ ತಪ್ಪಿದ ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಲಾಗಿದೆ ಎಂದ ಬಸನಗೌಡ ಪಾಟೀಲ್​ ಯತ್ನಾಳ್​, ಸವದಿಗೆ ಟಿಕೆಟ್ ನೀಡುವ ಬಗ್ಗೆ ಯಾರೂ ಮಾತು ಕೊಟ್ಟಿಲ್ಲ. 17 ಜನರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್ ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಅಲ್ಲದೇ ಮಂತ್ರಿ ಸ್ಥಾನ ನೀಡದೆ ಕುಮಠಳ್ಳಿ ಅವರಿಗೆ ಅನ್ಯಾಯ ಮಾಡಿದ್ದರ ಬಗ್ಗೆ ಯಡಿಯೂರಪ್ಪ ಅವರನ್ನೇ ನಾನು ಪ್ರಶ್ನಿಸಿದ್ದೆ. ರಾಣೆಬೆನ್ನೂರಿನಲ್ಲಿ ಆರ್ ಶಂಕರ್ ಅವರಿಗೆ ಮಂತ್ರಿಸ್ಥಾನ ಮತ್ತು ಟಿಕೆಟ್ ನೀಡದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಯತ್ನಾಳ್​ ಸಮಜಾಯಿಸಿ ನೀಡುವ ಯತ್ನ ಮಾಡಿದರು.

ಹಿಂದೂ ಧರ್ಮದ ಬಗ್ಗೆ ಅಪಮಾನ : ಯಮಕನಮರಡಿ ಅಷ್ಟೇ ಅಲ್ಲದೇ ಎಲ್ಲ ಕಡೆ ಪ್ರಚಾರಕ್ಕೆ ಹೋಗುತ್ತೇನೆ. ಹಿಂದೂ ಧರ್ಮದ ಬಗ್ಗೆ ಅಪಮಾನ ಮಾಡಿರುವ ಹಿಂದೂ ಧರ್ಮ ಎಂದರೆ ಅಶ್ಲೀಲ ಎಂದು ಸತೀಶ್​ ಜಾರಕಿಹೊಳಿ ಹೇಳಿದ್ದರು. ಈಗ ಸತೀಶ್ ಮತ್ತು ಅವರ ಮಗ ಈಗ ಹಣೆಗೆ ದೊಡ್ಡ ಕುಂಕುಮ ಇಟ್ಟುಕೊಳ್ಳುತ್ತಿದ್ದಾರೆ‌ ಎಂದು ಲೇವಡಿ ಮಾಡಿದ ಯತ್ನಾಳ್​, ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷ ಅಪಮಾನ ಮಾಡಿದೆ. ಅವರಿಗೆ ಭಾರತ ರತ್ನ ನೀಡಿದ್ದು, ಕಾಂಗ್ರೆಸ್ಸೇತರ ಸರ್ಕಾರ ಎಂದು ಕಿಡಿಕಾರಿದರು.

ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಎಂ ಬಿ ಝೀರಲಿ, ಎಫ್ ಎಸ್ ಸಿದ್ದನಗೌಡರ, ಶರದ್ ಪಾಟೀಲ, ನಿತೀಶ್ ಚೌಗುಲೆ ಸೇರಿ ಇನ್ನಿತರರು ‌ಉಪಸ್ಥಿತರಿದ್ದರು.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ