ಮಂಡ್ಯ: ‘ನಾನು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಪಟ್ಟಿಯನ್ನು 5 ಸಾವಿರ ಜನರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದರಲ್ಲಿ ಬಿಜೆಪಿ ಮುಖಂಡರ ಕುತಂತ್ರ ರಾಜಕಾರಣ ಅಡಗಿದೆ. ರಾಜಕೀಯ ಲೆಕ್ಕಾಚಾರದ ಕಾರಣಕ್ಕೆ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಡಿ.ಕೆ.ಸುರೇಶ್ ಅವರೂ ನಾಮಪತ್ರ ಸಲ್ಲಿಸಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುರುವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸುರೇಶ್ ನಾಮಪತ್ರ ಸಲ್ಲಿಕೆ ಆತುರದ ನಿರ್ಧಾರವಲ್ಲ, ಇಲ್ಲಿ ನಮ್ಮ ತಂತ್ರವೂ ಇದೆ. ಈಗಲೇ ನಾನು ಆ ಗುಟ್ಟು ಬಿಟ್ಟುಕೊಡುವುದಿಲ್ಲ, ನಾಳಿದ್ದು ಎಲ್ಲರಿಗೂ ತಿಳಿಯುತ್ತದೆ. ನಮಗೂ ರಾಜಕಾರಣ ಬರುತ್ತದೆ ಎಂದು ತಿಳಿಸುವುದು ನಮ್ಮ ಉದ್ದೇಶವಾಗಿದೆ’ ಎಂದರು.
‘ದ್ವೇಷದ ರಾಜಕಾರಣದಿಂದ ಬಿಜೆಪಿ ಮುಖಂಡರು ನನ್ನನ್ನು ಜೈಲಿಗೆ ಹಾಕಿಸಿ ತೊಂದರೆ ಕೊಟ್ಟರು. ರಾಹುಲ್ ಗಾಂಧಿ ಅವರನ್ನೇ ಬಿಡಲಿಲ್ಲ, ಇನ್ನು ನನ್ನನ್ನು ಬಿಟ್ಟಾರೆಯೇ? ಒಂದಂತೂ ಸತ್ಯ, ನೀವು ಏನೇ ಮಾಡಿದರೂ ಈ ಡಿ.ಕೆ.ಶಿವಕುಮಾರ್ ನಿಮಗೆ ಶರಣಾಗುವುದಿಲ್ಲ. ನಾನು ಜೈಲಿನಲ್ಲಿದ್ದಾಗ ನನ್ನ ಬಿಡುಗಡೆಗೆ ಒತ್ತಾಯಿಸಿ ನೂರಾರು ಜನರು ಹೋರಾಟ ಮಾಡಿ ಕೇಸು ಹಾಕಿಸಿಕೊಂಡಿದ್ದಾರೆ, ಆ ಬೆಂಬಲವನ್ನು ಮರೆಯಲು ಸಾಧ್ಯವಿಲ್ಲ’ ಎಂದರು.
‘ಬಿಜೆಪಿ ಸರ್ಕಾರ ರಾಜ್ಯಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ನಂದಿನಿ ನಮ್ಮವಳು, ಕೇಂದ್ರ ಸಚಿವ ಅಮಿತ್ ಶಾ ಅವಳನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದರು.