ವಿಜಯಪುರ: ಪೊಲೀಸ್ ಇಲಾಖೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಪೊಲೀಸ್ ಅಧಿಕಾರಿಯೋರ್ವ ಇದೀಗ ಬಿಜೆಪಿ ಟಿಕೆಟ್ಗಾಗಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಹೊರಬಂದಿದ್ದಾರೆ.
ನಾಗಠಾಣ ಎಸ್ಸಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿರುವ ಮಹೀಂದ್ರಕುಮಾರ ನಾಯಿಕ ಟಿಕೆಟ್ ಸಿಗುವ ವಿಶ್ವಾಸದೊಂದಿಗೆ ಕರ್ತವ್ಯಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಡಿಜಿಪಿ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಿಐ ನಾಯಕ ರಾಜಕೀಯ ಸೇರಬೇಕೆಂಬ ಉದ್ದೇಶದೊಂದಿಗೆ ಅದರಲ್ಲೂ ಬಿಜೆಪಿಯ ತತ್ವ ಸಿದ್ದಾಂತವನ್ನು ಮೆಚ್ಚಿ ಕರ್ತವ್ಯಕ್ಕೆ ಇತಿಶ್ರೀ ಹಾಡಿದ್ದಾರೆ.
ಕಳೆದ 2023, ಮಾ.31 ರಂದೇ ರಾಜೀನಾಮೆ ಅಂಗೀಕಾರಗೊಂಡಿದ್ದು, ಸುದೀರ್ಘ ಸೇವೆ ಸಲ್ಲಿಸಿದ ಪೊಲೀಸ್ ಇಲಾಖೆಯ ಬೆಂಗಳೂರಿನ ಕಟ್ಟಡದ ಪಾವಟಿಗೆಗೆ ಭಾವನಾತ್ಮಕವಾಗಿ ಹಣೆಬಡಿದು ನಮಸ್ಕರಿಸಿ ಹೊರ ಬಂದಿದ್ದಾರೆ. ಇದೀಗ ಚುನಾವಣೆ ಅಖಾಡಕ್ಕಿಳಿದಿದ್ದು ಟಿಕೆಟ್ ಸಿಗುವ ಭರವಸೆಯೊಂದಿಗೆ ತಮ್ಮದೇ ಬೆಂಬಲಿಗರ ಪಡೆ ಕಟ್ಟಿಕೊಂಡು ಪಕ್ಷ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮೂಲತಃ ವಿಜಯಪುರದ ಐನಾಪುರ ತಾಂಡಾದ ನಿವಾಸಿಯಾಗಿರುವ ಮಹೀಂದ್ರಕುಮಾರ ನಾಯಿಕ 2005ರಲ್ಲಿಯೇ ಬಿಜೆಪಿಯಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು. ತಾಲೂಕು ಪಂಚಾಯಿತಿ ವಿರೋಧ ಪಕ್ಷದ ಸದಸ್ಯರೂ ಆಗಿದ್ದರು. 2010ರಲ್ಲಿ ಪಿಎಸ್ಐ ಆಗಿ ನೇಮಕಗೊಂಡರು. ಮೈಸೂರಿನಲ್ಲಿ ತರಬೇತಿ ಪಡೆದು ವಿಜಯಪುರ ಸೇರಿದಂತೆ ಬಳ್ಳಾರಿ, ಧಾರವಾಡ, ಬಾಗಲಕೋಟೆ ಮತ್ತಿತರ ಕಡೆ ಸೇವೆ ಸಲ್ಲಿಸಿ ಸಿಪಿಐ ಆಗಿ ಬಡ್ತಿ ಹೊಂದಿದ್ದ ಇವರು ಇತ್ತೀಚೆಗಷ್ಟೇ ಸಿಪಿಐ ಆಗಿ ಬಡ್ತಿ ಹೊಂದಿದ್ದರು. ಬೆಂಗಳೂರಿನ ಡಿಜಿಪಿ ಕಚೇರಿಯಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದರು.